ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಲ್ಲರೆ ಬುದ್ಧಿಯ ಚಲುವರಾಯಸ್ವಾಮಿ, ನಿಮ್ಮದು “ವಿನಾಶಕಾಲೇ ವಿಪರೀತ ಬುದ್ಧಿ”. ನಿಮ್ಮಂಥವರ ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರ ಕುಟುಂಬದ ವಿರುದ್ಧ ನಿಮ್ಮ ರಾಜಕೀಯ ನಾಟಕ ಬಂದ್ಮಾಡಿ. ಮಂಡ್ಯ ಕೃಷಿ ವಿವಿಗೆ ಹೆಚ್.ಡಿ ರೇವಣ್ಣ ಅವರಾಗಲಿ, ಹೆಚ್.ಡಿ ಕುಮಾರಸ್ವಾಮಿ ಅವರಾಗಲಿ ಯಾವುದೇ ವಿರೋಧ ಮಾಡಿಲ್ಲ ಎಂದು ಜೆಡಿಎಸ್ ತಿಳಿಸಿದೆ.
ನಿಮ್ಮ ಸುಳ್ಳು ಹೇಳಿಕೆಯನ್ನು ಜನರು ಗಮನಿಸುತ್ತಿದ್ದಾರೆ. “ಮಂಡ್ಯದವರು ಛತ್ರಿಗಳು” ಎಂದು ಬಹಿರಂಗ ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಂಡ್ಯ ಜಿಲ್ಲೆಯ ಜನರನ್ನು ಅವಮಾನಿಸಿದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದನ್ನು ಖಂಡಿಸದ ನೀವು ಮಂಡ್ಯ ಜಿಲ್ಲೆಯ ನಾಲಾಯಕ್ಉಸ್ತುವಾರಿ ಮಂತ್ರಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜಕೀಯ ದುರುದ್ದೇಶದಿಂದ ಹಾಸನ ಕೃಷಿ ಕಾಲೇಜನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೆಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಹಾಸನ ಕೃಷಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಉಳಿಸಬೇಕು ಎಂದು ಹೆಚ್.ಡಿ. ರೇವಣ್ಣ ಅವರು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಸದನದಲ್ಲಿ ಶಾಸಕರು, ಮುಖ್ಯಮಂತ್ರಿ ಗಮನವನ್ನೂ ಸೆಳೆದಿದ್ದರು, ಆಗ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸರ್ಕಾರವೂ ಉತ್ತರ ಕೊಟ್ಟಿತ್ತು.
ಆದರೆ ರಾತೋರಾತ್ರಿ ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರಿಸಿದ ನರಿಬುದ್ಧಿಯ ರಾಜಕಾರಣಿ, ಕುತಂತ್ರಿ ಯಾರು? ಕೃಷಿ ಸಚಿವರೇ ಇಂತಹ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಟ್ಟು, ಇನ್ನಾದರೂ ನಾಡಿನ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.