ಚಂದ್ರವಳ್ಳಿ ನ್ಯೂಸ್, ತುರುವೇಕೆರೆ:
ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ಎಸ್ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.
ಕುಡಿದು ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎನ್ನುವ ವ್ಯಕ್ತಿ, ಎಟಿಎಂಗೆ ತೆರಳಿ ಹಣ ಡ್ರಾ ಮಾಡಲು ಯತ್ನಿಸಿದಾಗ, ದುಡ್ಡು ಬಂದಿರಲಿಲ್ಲ.
ಹೀಗಾಗಿ ರೊಚ್ಚಿಗೆದ್ದ ವಡಿವೇಲು ಸ್ವಾಮಿ, ಕಲ್ಲಿನಿಂದ ಹೊಡೆದು ಎಟಿಎಂ ಧ್ವಂಸಗೊಳಿಸಿದ್ದ. ನವೆಂಬರ್ 27ರ ರಾತ್ರಿ ಘಟನೆ ನಡೆದಿತ್ತು. ಸ್ಥಳೀಯರ ದೂರಿನ ಅನ್ವಯ ಇದು ಕಳ್ಳತನ ಆಗಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದರು.
ಈ ವೇಳೆ ಕುಡುಕ ಮಹಾಶಯನ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಕುಡುಕನ ಹುಚ್ಚಾಟ ಬಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

