ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರದ ನೇಕಾರರು ಅನ್ಯ ರಾಜ್ಯದ ಸೂರತ್, ರೇಪಿಯರ್ ಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೊಡ್ಡಬಳ್ಳಾಪುರ ಟೆಕ್ಟ್ ಟೈಲ್ಸ್ ವೀವರ್ಸ್ ಅಸೋಸಿಯೇಷನ್ ನ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಮುಖಂಡರಾದ ಶ್ರೀನಿವಾಸ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಗುಡಿ ಕೈಗಾರಿಕೆಯಲ್ಲಿ ಒಂದಾದ ನೇಕಾರಿಕೆಯನ್ನು ತಲತಲಾಂತರಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು ನಗರದಲ್ಲಿ ಸುಮಾರು 25000 ಮಗ್ಗಗಳು ಇದ್ದು ಈ ಉದ್ಯೋಗವನ್ನು ನಂಬಿಕೊಂಡು ನೇಕಾರರು, ಬಣ್ಣ ಮಾಡುವವರು, ವೈಡಿಂಗ್ ಹಾಕುವವರು, ವಾರ್ಪು ಸುತ್ತುವವರು, ಅಚ್ಚು ಕೆಚ್ಚುವವರು ಜೊತೆಯಲ್ಲಿ ಸೀರೆ ಪಾಲಿಶ್ ಮಾಡುವವರು ಸಹ ನೇಕಾರಿಕೆ ಉದ್ಯಮವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುತ್ತಾರೆ. ಈ ನೇಕಾರಿಕೆ ಉದ್ಯಮವನ್ನು ನಂಬಿಕೊಂಡು ಸುಮಾರು 1,00,000 (ಒಂದು ಲಕ್ಷ) ಜನ ಜೀವನ ನಡೆಸುತ್ತಿರುತ್ತಾರೆ.
ಈ ಮದ್ಯೆ ನಮ್ಮ ನೇಕಾರಿಕೆಯಲ್ಲಿ ನಾವು ಉತ್ಪಾದನೆ ಮಾಡುವ ಸೀರೆಗಳನ್ನು ಸೂರತ್ ನಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್ ಏರ್ಜೆಟ್ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು ದೊಡ್ಡಬಳ್ಳಾಪುರಕ್ಕೆ ತಂದು ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ದೊಡ್ಡಬಳ್ಳಾಪುರ ನೇಕಾರಿಕೆ ಉದ್ಯಮವನ್ನು ಹಾಳು ಮಾಡಿದ್ದಾರೆ. ಕಾರಣ ಆಧುನಿಕ ಮಗ್ಗಗಳಲ್ಲಿ ಅತಿಹೆಚ್ಚು- ಸೀರೆಗಳ ಉತ್ಪಾದನೆಯಾಗುವುದರಿಂದ ನಮ್ಮ ದೊಡ್ಡಬಳ್ಳಾಪುರದ ಉದ್ಯಮ ಉಳಿಯ ಬೇಕಾದರೆ ಆಧುನಿಕ ಮಗ್ಗಗಳಿಂದ ಅನ್ಯ ರಾಜ್ಯಗಳಿಂದ ದಿನನಿತ್ಯ ಹತ್ತಾರು ಸಾವಿರ ಸೀರೆಗಳು ಬರುತ್ತಿದ್ದು ಅದನ್ನು ಅರ್ಧ ಬೆಲೆಗೆ ಮಾರಿ ದೊಡ್ಡಬಳ್ಳಾಪುರದಲ್ಲಿ ನಾವು ತಯಾರಿಸುವ ಸೀರೆಗಳು ಕಮ್ಮಿ ಬೆಲೆಗೆ ಮಾರಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇದ್ದೇವೆ. ಇದೇ ರೀತಿ ಅನ್ಯ ರಾಜ್ಯಗಳಿಂದ ಮತ್ತು ನಮ್ಮ ರಾಜ್ಯದ ಬೇರೆ ಬೇರೆ ಕಡೆಯಿಂದ ರೇಪಿಯರ್ ಮತ್ತು ಏರ್ಜೆಟ್ ಸೀರೆಗಳು ತಾಲೂಕಿಗೆ ಬರುವುದನ್ನು ಅತಿ ಜರೂರಾಗಿ ತಡೆಯದಿದ್ದರೆ ನೇಕಾರರು ಮತ್ತು ಇದನ್ನು ನಂಬಿರುವ ಹಲವಾರು ನೇಕಾರರು ಬೀದಿ ಪಾಲಾಗುವ ಸಂಭವ ಉದ್ಭವವಾಗಿದೆ.
ಈ ಉದ್ಯೋಗವನ್ನು ನಂಬಿಕೊಂಡು ನೇಕಾರರು ಬ್ಯಾಂಕುಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ಹೆಚ್ಚಿನ ಬಡ್ಡಿ ದರಗಳಿಗೆ ಸಾಲವನ್ನು ಪಡೆದು ಉದ್ಯೋಗವನ್ನು ಮಾಡುತ್ತಿದ್ದೇವೆ. ರೇಪಿಯರ್ ಏರ್ ಜೆಟ್ ಮತ್ತು ಇತರೆ ಆಧುನಿಕ ಮಗ್ಗಗಳಿಂದ ಬರುವ ಒತ್ತಡವನ್ನು ತಾಳಲಾರದೆ ಬ್ಯಾಂಕುಗಳಿಗೆ ಹಣ ಸಂಧಾಯ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ.
ಕಾನೂನಿಕ ಪ್ರಕಾರ ಲಾಳಿರಹಿತ ಮಗ್ಗಗಳಲ್ಲಿ (ರೇಪಿಯರ್ ಮತ್ತು ಏರ್ ಜೆಟ್) ಸೀರೆಗಳು ಮತ್ತು ಜರಿ ಸೀರೆಗಳು ಉತ್ಪಾದಿಸುವಂತಿಲ್ಲ. ಆದ್ದರಿಂದ ಸಂಭಂಧಪಟ್ಟ ಅಧಿಕಾರಿಗಳು ಈ ಕೂಡಲೇ ರೇಪಿಯರ್ ಮತ್ತು ಏರ್ಜೆಟ್ ಮಗ್ಗಗಳ ಮೇಲೆ ಕ್ರಮ ಜರುಗಿಸಿ ಸೀರೆಗಳು ಬರುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ವಿವಿಧ ನೇಕಾರ ಸಂಘಟನೆಗಳಿಂದ ಪ್ರತಿಭಟನೆ ಮೂಲಕ ಉಗ್ರ ಹೋರಾಟ ನಡೆಸುತ್ತೇವೆ ಎಂದು ತಾಲೂಕಿನಲ್ಲಿ ಸೂರತ್ ರೇಪಿಯರ್ ಮಗ್ಗಗಳನ್ನು ತರಿಸುತ್ತಿರುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಡಿ. ಆರ್. ದ್ರುವಕುಮಾರ್, ನರಸಿಂಹ ಮೂರ್ತಿ, ಡಿ. ಪಿ. ಮಂಜುನಾಥ್, ಡಿ. ಎಲ್.ನಾಗರಾಜ್, ಎ. ಸಿ. ವೆಂಕಟ ಸ್ವಾಮಿ ಡಿ. ಆರ್. ಚಂದ್ರಶೇಖರ್ (ಬಾಬು ) ಎಸ್.ಎಂ ಭಾಸ್ಕರ್, ಅನಿಲ್ ಕುಮಾರ್ , ಸೇರಿದಂತೆ ಹಲವಾರು ನೇಕಾರ ಮುಖಂಡರು ಭಾಗವಹಿಸಿದ್ದರು.

