ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ ಕುಲದೇವರಾದ ಶ್ರೀ ಕಾಟ ಮಹಲಿಂಗೇಶ್ವರ ದೇವಸ್ಥಾನದಲ್ಲಿ ತಮಿಳುನಾಡು ಕುಂಚಿಟಿಗರಿಗೆ ಸ್ವಾಗತ ಕೋರಲಾಯಿತು. ಹೊಸ ವರ್ಷ 2026ರ ಕುಂಚಿಟಿಗರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಸವನಹಳ್ಳಿ ರಮೇಶ್ ಮಾತನಾಡಿ ದೆಹಲಿಯಲ್ಲಿ ವಾಸವಿದ್ದ ಕುಂಚಿಟಿಗರು ಮುಸ್ಲಿಮರ ದಾಳಿಯಿಂದ ಕುಂಚಿಟಿಗ ಕುಲ, ಶೀಲದ ರಕ್ಷಣೆಗಾಗಿ ದಕ್ಷಿಣದತ್ತ ಆಗಮಿಸಿ ವಿಜಯನಗರ ಸಾಮ್ರಾಜ್ಯದಲ್ಲಿ ಬಂದು ನೆಲೆಸಿದರು.
ವಿಜಯನಗರ ಪತನದ ನಂತರ ಕರ್ನಾಟಕ, ಆಂಧ್ರಪ್ರದೇಶ ,ತಮಿಳುನಾಡು, ಕೇರಳ, ಮಹಾರಾಷ್ಟ್ರ ಭಾಗಗಳಲ್ಲಿ ಹರಿದು ಹಂಚಿ ಹೋದರು.
ಆದರೆ ತಮಿಳುನಾಡಿನಲ್ಲಿ ನೆಲೆಸಿರುವ ಕುಂಚಿಟಿಗ ಕುಲ ಬಾಂಧವರು ತಮ್ಮ ಕುಲ ಮೂಲದ ಮನೆ ದೇವರುಗಳನ್ನು ಹುಡುಕಿಕೊಂಡು ಈ ಹಿಂದೆ ಪಾದಯಾತ್ರೆಯಲ್ಲಿ ಎತ್ತಿನ ಬಂಡಿಗಳಲ್ಲಿ ಬರುತ್ತಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಒಗ್ಗೂಡಿ ಬಸ್ಸು ಕಾರುಗಳಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ,ಮಧುಗಿರಿ, ಶಿರಾ, ಹಿರಿಯೂರು ತಾಲೂಕು, ಆಂಧ್ರ ಪ್ರದೇಶದ ಭಾಗದ ಮನೆ ದೇವರುಗಳಿಗೆ ಎಷ್ಟೇ ಕಷ್ಟವಿದ್ದರೂ ಹುಡುಕಿಕೊಂಡು ಬರುತ್ತಾರೆ ಎಂದು ತಿಳಿಸಿದರು.
ಬಂದು ಪೂಜೆ ಸಲ್ಲಿಸಿ ಸ್ವಾಮಿ ದರ್ಶನ ಮಾಡಿ ಪುನೀತರಾಗುತ್ತಾರೆ ಇದರಿಂದ ಅವರ ಮುಂದಿನ ಪೀಳಿಗೆಯ ಮಕ್ಕಳಿಗೆ ಸಂಸ್ಕಾರ ಮೌಲ್ಯ ಉತ್ತಮ ರೀತಿಯಲ್ಲಿ ಲಭಿಸುತ್ತದೆ ಇವರ ಈ ರೀತಿಯ ನಡೆಗಳು ನಮಗೆಲ್ಲ ಮಾದರಿಯಾಗಬೇಕು, ಇಲ್ಲಿಯವರೆಗೆ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶಕ್ಕೆ ಬಂದು ಹೋಗಿ ವಿಶ್ವಾಸ ಬೆಳೆಸಲಾಗಿದೆ ಅದೇ ರೀತಿ ಮುಂದಿನ ದಿನಗಳಲ್ಲಿ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಮುಖಾಂತರ ಸಮಾಜದ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಕುಂಚಿಟಿಗರ ಸಂಘದ ಅಧ್ಯಕ್ಷ ಪ್ರೊ. ಮೈಸೂರ್ ಶಿವಣ್ಣ ಮಾತನಾಡಿ ಕರ್ನಾಟಕದ ಧರ್ಮಪ್ರಕಾಶ್ ರಾವ್ ಬಹದ್ದೂರ್ ಬನ್ಮಯ್ಯನವರು ಕುಂಚಿಟಿಗರ ಉಳಿವಿಗಾಗಿ ಅವಿರತ ಶ್ರಮಪಟ್ಟು ಬನುಮಯ್ಯ ವಿದ್ಯಾ ಸಂಸ್ಥೆಗಳು, ವಸತಿ ನಿಲಯಗಳನ್ನು ಮೈಸೂರು ಭಾಗದಲ್ಲಿ ತೆರೆದು ಸಮಾಜಕ್ಕೆ ಮಾದರಿಯಾದರು ಎಂದು ತಿಳಿಸಿದರು.
ತುಮಕೂರಿನ ಕೆಂಪೇಗೌಡ ವಿದ್ಯಾಸಂಸ್ಥೆಯ ದಾಸೇಗೌಡ ಮಾತನಾಡಿ ತಮಿಳುನಾಡು ಕುಂಚಿಟಿಗರು ಅತ್ಯಂತ ಪ್ರೀತಿ, ಆತ್ಮೀಯತೆ ಗೌರವಾದರೆಗಳನ್ನು ಕರ್ನಾಟಕದೊಂದಿಗೆ ಹೊಂದಿದ್ದಾರೆ. ನಾವುಗಳು ಸಹ ಅವರೊಂದಿಗೆ ಅದೇ ರೀತಿ ಪ್ರೀತಿ ವಿಶ್ವಾಸವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಕೆ.ಜಿ. ಹನುಮಂತರಾಯ ಸ್ವಾಗತಿಸಿದರು. ಜಿಲ್ಲಾ ಸಮಿತಿ ಪದಾಧಿಕಾರಿ ಕುಬೇರಪ್ಪ ವಂದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್ ಸ್ಮರಣಿಕೆಗಳನ್ನು ನೀಡಿದರು. ಚಿಲ್ಲಹಳ್ಳಿಯ ಶ್ರೀ ಕಾಟ ಮಹಾಲಿಂಗೇಶ್ವರ ದೇವಸ್ಥಾನದ ಗುಡಿ ಗೌಡ ನಿಜಲಿಂಗಪ್ಪ, ಪೂಜಾರ್ ಪ್ರಕಾಶ್, ಶಶಿಧರ್, ರಾಮಣ್ಣ, ನಿವೃತ್ತ ಪ್ರಾಂಶುಪಾಲ ಮಹಾಲಿಂಗಪ್ಪ, ಪೂಜಾರ ಶಿವಣ್ಣ,
ಹುಚ್ಚವನಹಳ್ಳಿ ಅವಿನಾಶ್, ತಮಿಳುನಾಡಿನ ಜ್ಯೋತಿರಾಜ್, ಸುಂದರಮೂರ್ತಿ ಸೇರಿದಂತೆ ಸುಮಾರು 65 ಜನ ನಿವೃತ್ತ ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರುಗಳು ದೇವಸ್ಥಾನ ಸಮಿತಿಯವರು ಮಹಿಳೆಯರು ತಮಿಳುನಾಡುನಿಂದ ಬಂದಿದ್ದ 65 ಜನ ಕುಲಬಾಂಧವರಿಗೆ ಪೂಜೆ ಸಲ್ಲಿಸಿ, ಸನ್ಮಾನಿಸಿ, ಉಟೋ ಪಚಾರ ಮಾಡಿ ಬೀಳ್ಕೊಡುಗೆ ಮಾಡಿದರು.

