ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಲಿತರ ಹಣ ದುರ್ಬಳಕೆ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ದಲಿತ ಸಮುದಾಯದ ನಾಯಕರ ಬೆನ್ನಿಗೆ ಚೂರಿ ಹಾಕಿ ಎರಡು ಬಾರಿ ಅಧಿಕಾರಕ್ಕೇರಿರುವ ಸಿಎಂ ಸಿದ್ದರಾಮಯ್ಯ ನವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ.
ದಲಿತರ ಅಭ್ಯುದಯಕ್ಕಾಗಿ ವಿನಿಯೋಗವಾಗಬೇಕಾಗಿದ್ದ 25,000 ಕೋಟಿ ರೂಪಾಯಿ ಎಸ್ಸಿಪಿ/ಟಿಎಸ್ಪಿ ಹಣವನ್ನ ಗ್ಯಾರೆಂಟಿ ಹೆಸರಿನಲ್ಲಿ ಕಬಳಿಸಿ ದಲಿತರಿಗೆ ವಂಚನೆ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ದಲಿತರ ಬಗ್ಗೆ ನಿಮಗಿರುವ ಬದ್ಧತೆ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕನ್ನಡಿಗರ ಖಜಾನೆ ಲೂಟಿ ಮಾಡಿ ರಾಜ್ಯವನ್ನ ಅಭಿವೃದ್ಧಿ ಶೂನ್ಯ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಾಡಿನ ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಮೋಸ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

