ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ನಗರಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಇತ್ತೀಚೆಗೆ ಅಧ್ಯಕ್ಷರಾಗಿ ಆಯ್ಕೆಯಾದವರ ಪದಗ್ರಹಣ ಸಮಾರಂಭ ಅತ್ಯಂತ ಸಡಗರ ಸಂಭ್ರಮದಿಂದ ಕೂಡಿತ್ತು. ಯಾವುದೋ ಮದುವೆ ಮನೆಯಲ್ಲಿ ನಡೆಯುವ ಸಂಭ್ರಮದಂತೆ ಭಾಸವಾಗುತ್ತಿತ್ತು. ಇಡೀ ನಗರಸಭೆ ಕಟ್ಟಡ, ಆವರಣವನ್ನ ಪ್ಲಕ್ಸ್ ಗಳು ಆವರಿಸಿಕೊಂಡು ನಗರಸಭೆಗೆ ಬಂದು ಹೋಗುವವರಿಗೆ ಶುಭ ಕೋರುವಂತೆ ಭಾಸವಾಗುತ್ತಿತ್ತು.
ಇದು ನಗರಸಭೆ ಕಚೇರಿಯೋ, ಮದುವೆ ಕಾರ್ಯಕ್ರಮಕ್ಕೆ ಸಿದ್ದಗೊಂಡಿರೋ ಕಲ್ಯಾಣ ಮಂಟಪವೋ ಎಂಬಂತಹ ವಾತಾವರಣ ಗುರುವಾರ ನಗರದ ನಗರಸಭೆ ಕಛೇರಿಯನ್ನು ಗಮನಿಸಿದವರಿಗೆ ಅನಿಸುತ್ತಿತ್ತು.
ನೂತನವಾಗಿ ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಪದಗ್ರಹಣಕ್ಕೆ ನವ ವಧುವಂತೆ ಸಿಂಗಾರಗೊಂಡ ನಗರಸಭೆ ಕಚೇರಿ ಬಾಗಿಲಿಗೆ ಹೂವಿನ ಡೇಕೋರೇಷನ್, ಫ್ಲೆಕ್ಸ್ ಗಳು, ರಾತ್ರೋರಾತ್ರಿ ಸಿದ್ದಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕೊಠಡಿಗಳು, ಅವರ ಕೊಠಡಿಗಳಿಗೆ ಸಿಂಗಾರ ಹೀಗೇ ಇಡೀ ನಗರಸಭೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಕಚೇರಿಯ ಮೂರು ಕೊಠಡಿಗಳನ್ನು ಸಿಂಗಾರಗೊಳಿಸಿ ಬೋರ್ಡ್ ಹಾಕಿ ಪೂಜೆ ಪುನಸ್ಕಾರ ಸಾಂಗೋಪಾಂಗವಾಗಿ ನಡೆದವು.
ಕಚೇರಿ ಆವರಣದಲ್ಲಿ ವಿವಿಧ ಮುಖಂಡರುಗಳ ಶುಭಾಶಯ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಆವರಣದಲ್ಲಿ ಶಾಮಿಯಾನ ಹಾಕಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಕ್ಟೊಬರ್ 5ಕ್ಕೆ ಮುಗಿಯುವ ಅಧಿಕಾರಕ್ಕೆ ಈ ಪರಿಯಾಗಿ ವ್ಯವಸ್ಥೆ ಮಾಡಿದ್ದು ಉಬ್ಬೇರಿಸುವಂತಿತ್ತು.
ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯ ಪದಗ್ರಹಣಕ್ಕೆ ಇಷ್ಟೊಂದು ಆಡಂಬರದ ಪದಗ್ರಹಣ ಬೇಕಿತ್ತಾ ಎಂದು ಸಾರ್ವಜನಿಕರು ಗೊನಗಿಕೊಳ್ಳುತ್ತಿದ್ದದ್ದು ಕಂಡು ಬಂತು.
ಸಾರ್ವಜನಿಕರು ಕಚೇರಿ ಕೆಲಸಕ್ಕೆ ಬಂದು ಇವತ್ತೇನು ಕೆಲಸ ಆಗುವುದಿಲ್ಲ ಎಂದು ಹಿಂತಿರುಗುತ್ತಿದ್ದದ್ದು ಗುರುವಾರ ನಗರಸಭೆಯಲ್ಲಿ ಕಂಡು ಬಂತು. ಇದೆಲ್ಲದರ ನಡುವೆ ನಗರಸಭೆ ಸದಸ್ಯ ವಿಠ್ಠಲ್ ಅವರು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಸಮಿತಿ ಅಧ್ಯಕ್ಷರಾಗಿ, ಎಂ ಡಿ ಸಣ್ಣಪ್ಪ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ರತ್ನಮ್ಮನವರು ನಗರ ಯೋಜನೆ ಮತ್ತು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.
ಅಧಿಕಾರ ಹಿಡಿದಿರುವ ಮೂರು ಮಂದಿ ಸದಸ್ಯರು ನಗರಸಭೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲಿ ಎನ್ನುವ ಬಯಕೆಯೊಂದಿಗೆ ಚಂದ್ರವಳ್ಳಿ ಪತ್ರಿಕೆ ಬಳಗ ಮೂರು ಅಧ್ಯಕ್ಷರಿಗೂ ಶುಭ ಆರೈಕೆ ಮಾಡಿದೆ.
ಇದು ಯಾವ ನ್ಯಾಯ-
ನಗರದ ಗಾಂಧಿ ವೃತ್ತದಿಂದ ರಂಜಿತಾ ಹೋಟೆಲ್ ವರೆಗಿನ 1.5 ಕಿಮೀ ಉದ್ದದ ಪ್ರಧಾನ ರಸ್ತೆಯ ಮರು ಡಾoಬರೀಕರಣ ನಡೆಸಲಾಗಿದೆ. ವಿಶೇಷ ಅನುದಾನದಲ್ಲಿ ಈ ಡಾoಬರೀಕರಣ ನಡೆದಿದ್ದು ಅತ್ತ ವಾಹನಗಳು ಓಡಾಡುತ್ತಲೇ ಇದ್ದರೂ ಸಹ ಕಾಮಗಾರಿ ಮುಗಿಸಲಾಗಿದೆ.
ರಸ್ತೆ ಡಾoಬರಿಕರಣ ಮಾಡಿದ್ದು ಒಂದು ಕಂಪನಿ, ಡಾoಬರಿಕರಣದ ಜವಾಬ್ದಾರಿ ಇನ್ನೊಂದು ಕಂಪನಿಯದ್ದು ಎನ್ನಲಾಗಿದ್ದು ಟೆಂಡರ್ ಕರೆಯದೆ ಕೆಲಸ ಮುಗಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸದಸ್ಯರೊಬ್ಬರು ಗಂಭೀರ ಆರೋಪ ಮಾಡಿದರು. ಇದೆಲ್ಲಾ ಸಾಲದು ಎಂಬಂತೆ ಪ್ರಧಾನ ರಸ್ತೆಯ ಅಂಬಿಕಾ ಸ್ಟುಡಿಯೋ ಮುಂಭಾಗ ಒಂದಷ್ಟು ಅಡಿಗಳಷ್ಟು ರಸ್ತೆಗೆ ಡಾoಬರು ಮಾಡದೇ ಹೋಗಿದ್ದು ಇದು ಯಾವ ಮಾದರಿಯ ಕಾಮಗಾರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.