ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಆರಂಭಕ್ಕೆ ವಿಭಿನ್ನ ತೀರ್ಪು ನೀಡಿದ ಸುಪ್ರೀಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ತನಿಖೆ ಆರಂಭಿಸಲು ಪೂರ್ವಾನುಮತಿ ಪಡೆಯುವ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್
17ಎ  ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಕೆ. ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ವಿಭಿನ್ನ ತೀರ್ಪು ನೀಡಿ ಆದೇಶಿಸಿದೆ.

ನ್ಯಾಯಮೂರ್ತಿ ನಾಗರತ್ನ ಅವರು ವಿಚಾರಣೆಯ ಸಮಯದಲ್ಲಿ ಸೆಕ್ಷನ್ 17 ಅಸಂವಿಧಾನಿಕ, ಅದನ್ನು ರದ್ದುಗೊಳಿಸಬೇಕು ಮತ್ತು ತನಿಖೆಗೆ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ. ಪೂರ್ವಾನುಮತಿಯ ಅವಶ್ಯಕತೆಯು ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಇದು ತನಿಖೆಗೆ ಅಡ್ಡಿಯಾಗುತ್ತದೆ ಮತ್ತು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ಹೇಳಿದರು.

- Advertisement - 

ನ್ಯಾಯಮೂರ್ತಿ ವಿಶ್ವನಾಥನ್ ಅವರು ಸೆಕ್ಷನ್ 17 ಅನ್ನು ಅಸಾಂವಿಧಾನಿಕ ಎಂದು ಪರಿಗಣಿಸಲು ನಿರಾಕರಿಸಿದರು. ಲೋಕಪಾಲ ಅಥವಾ ರಾಜ್ಯದ ಲೋಕಾಯುಕ್ತರು ಶಿಕ್ಷೆ ನಿರ್ಧರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಸೆಕ್ಷನ್ 17 ಸಾಂವಿಧಾನಿಕವಾಗಿ ಮಾನ್ಯವಾಗಿದೆ. ಈ ನಿಬಂಧನೆ ರದ್ದುಗೊಳಿಸಿದರೆ, ಅದು ಸ್ನಾನದ ನೀರಿನೊಂದಿಗೆ ಮಗುವನ್ನೂ ಹೊರಗೆಸೆಯುತ್ತದೆ. ಪ್ರಾಮಾಣಿಕ ಸಾರ್ವಜನಿಕ ಸೇವಕರನ್ನು ಕ್ಷುಲ್ಲಕ ತನಿಖೆಗಳಿಂದ ರಕ್ಷಿಸದಿದ್ದರೆ, ನೀತಿ ಶಕ್ತಿಹೀನವಾಗುತ್ತದೆ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ವಿಭಿನ್ನ ತೀರ್ಪು ನೀಡಿದೆ.
ವಕೀಲ ಪ್ರಶಾಂತ್ ಭೂಷಣ್ ಅರ್ಜಿದಾರರಾದ ಸರ್ಕಾರೇತರ ಸಂಸ್ಥೆ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಪರವಾಗಿ ವಾದ ಮಂಡಿಸಿದರು.

- Advertisement - 

ಕಳೆದ ಆಗಸ್ಟ್‌ ನಲ್ಲಿ ನಡೆದ ವಿಚಾರಣೆ ಸಮಯದಲ್ಲಿ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ಕಿರಿಕಿರಿಗೊಳಿಸುವ ದೂರುಗಳಿಂದ ರಕ್ಷಿಸದಿದ್ದರೆ ನೀತಿ ಶಕ್ತಿಹೀನವಾಗಬಹುದು ಎಂದು ಸುಪ್ರೀಂ ಕೋರ್ಟ್ ಗಮನಿಸಿತ್ತು. ಆದಾಗ್ಯೂ, ಭ್ರಷ್ಟ ಅಧಿಕಾರಿಗಳಿಗೆ ಯಾವುದೇ ರಕ್ಷಣೆ ಲಭ್ಯವಿರಬಾರದು ಎಂದು ಒತ್ತಿ ಹೇಳಿತ್ತು.

ಅರ್ಜಿದಾರ ಸರ್ಕಾರೇತರ ಸಂಸ್ಥೆ ಈ ನಿಬಂಧನೆಯನ್ನು ಏಕೆ ಪ್ರಶ್ನಿಸುತ್ತಿದೆ ಮತ್ತು ಅದರಲ್ಲಿ ಏನು ತಪ್ಪಿದೆ ಎಂದು ಪೀಠವು ಪ್ರಶಾಂತ್​ ಭೂಷಣ್ ಅವರನ್ನು ಕೇಳಿತು. ತನಿಖೆ ಅಥವಾ ವಿಚಾರಣೆಗೆ ಪೂರ್ವಾನುಮತಿ ಕಡ್ಡಾಯಗೊಳಿಸುವ ನಿಬಂಧನೆಯು ಭ್ರಷ್ಟಾಚಾರ ಅಪರಾಧಗಳ ತನಿಖೆಯನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸುತ್ತದೆ ಎಂದು ಅವರು ವಾದಿಸಿದರು.

ಪ್ರಾಮಾಣಿಕ ಸರ್ಕಾರಿ ಸೇವಕರನ್ನು, ತಮ್ಮ ಅಧಿಕೃತ ಕಾರ್ಯಗಳನ್ನು ನಿರ್ವಹಿಸುವವರನ್ನು ಕ್ಷುಲ್ಲಕ ದೂರುಗಳಿಂದ ರಕ್ಷಿಸಲು ಮತ್ತು ಭ್ರಷ್ಟ ಅಧಿಕಾರಿಗಳಿಗೆ ಯಾವುದೇ ರಕ್ಷಣೆ ಲಭ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಮತೋಲನ ಸಾಧಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

 

Share This Article
error: Content is protected !!
";