ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ “ಗ್ಯಾರೆಂಟಿ” ಭಾಗ್ಯ! ದೊರೆತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸತ್ಯ ಎಂದರೆ ಅಲರ್ಜಿ, ಸುಳ್ಳು ಎಂದರೆ ಎನರ್ಜಿ. 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಿದ್ದು ಎಂಬ ಸರಳ ಸತ್ಯ ಹೇಳಿದ್ದೆ ಸಚಿವ ರಾಜಣ್ಣನವರಿಗೆ ಮುಳುವಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರ ಮತಗಳ್ಳತನ ಸುಳ್ಳಿಗೆ ಕನ್ನಡಿ ಹಿಡಿದಿದ್ದೆ ಸಚಿವ ರಾಜಣ್ಣನವರ ತಪ್ಪಾ? ಸತ್ಯ ಹೇಳಿದ್ದಕ್ಕೆ ರಾಜೀನಾಮೆ ಶಿಕ್ಷೆನಾ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ನವರಿಗೆ ಸತ್ಯಕ್ಕಿಂತ, ದಲಿತ ಸಚಿವರೊಬ್ಬರ ಗೌರವಕ್ಕಿಂತ ಹೈಕಮಾಂಡ್ ಗುಲಾಮಗಿರಿಯೇ ಹೆಚ್ಚಾಗಿದ್ದು ದುರಂತ ಎಂದು ಅಶೋಕ್ ವಾಗ್ದಾಳಿ ಮಾಡಿದರು.
ಸಚಿವ ರಾಜಣ್ಣನವರನ್ನು ಈ ರೀತಿ ಅಗೌರವವಾಗಿ ಸಂಪುಟದಿಂದ ವಜಾ ಮಾಡಿರುವುದು, ಭಾರತೀಯ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಮನಸ್ಥಿತಿಗೆ ಮತ್ತೊಂದು ತಾಜಾ ಉದಾಹರಣೆ ಅಷ್ಟೇ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಸೋಲಿಸಿದ ಕಾಂಗ್ರೆಸ್ ನವರು ಕೆ.ಎನ್.ರಾಜಣ್ಣ ಅವರ ಸತ್ಯವನ್ನು ಸಹಿಸುತ್ತಾರಾ? ಎಂದು ಖಾರವಾಗಿ ಅಶೋಕ್ ಪ್ರಶ್ನಿಸಿದ್ದಾರೆ.

