ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಅಡಿ ಡ್ಯಾಂ ನಿರ್ಮಿಸದಂತೆ ರಾಜ್ಯಪಾಲರ ಮೊರೆ ಹೋದ ಗ್ರಾಮಸ್ಥರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆಗೆ ಡ್ಯಾಂ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳು ಮುಳುಗಡೆಯಾಗಲಿರುವುದನ್ನು ವಿರೋಧಿಸಿ ರೈತರ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತಡೆಯುವಂತೆ ಕೋರಿದೆ.

ಎತ್ತಿನಹೊಳೆ ಯೋಜನೆಯಲ್ಲಿ ಡ್ಯಾಂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ಯೋಜನೆ ವ್ಯಾಪ್ತಿಯ 7 ಗ್ರಾಮಗಳ ರೈತರು ಹೋರಾಟ ಪ್ರಾರಂಭಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲು ರೈತರ ನಿಯೋಗ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ, ಲಕ್ಕೇನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಡ್ಯಾಂ ನಿರ್ಮಾಣ ಮಾಡದಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿ ಒತ್ತಾಯಿಸಿದೆ.

- Advertisement - 

ಜಮೀನು ನಾಶ:
ಪರಿಸರ ಕಾಯ್ದೆ ಉಲ್ಲಂಘಿಸಿ
, ರೈತರ ಅಭಿಪ್ರಾಯ ಕೇಳದೇ ಡ್ಯಾಂ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗಿದೆ. ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣವಾದರೆ 2.45 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಶ್ರೀರಾಮನಹಳ್ಳಿ, ದಾಸರಪಾಳ್ಯ, ಶಿಂಗೇನಗಳ್ಳಿ, ಗಾಣದಾಳು, ಹನುಮಂತಯ್ಯನಪಾಳ್ಯ, ನರಸಾಪುರ, ಲಕ್ಕೇನಹಳ್ಳಿ ಸೇರಿದಂತೆ 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿ 2,673 ಎಕರೆ ಫಲವತ್ತಾದ ಜಮೀನು ನಾಶವಾಗುತ್ತದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಜಮೀನು ಕೊಡುವುದಿಲ್ಲ:
ಮುಳುಗಡೆಯಾಗುವ 7 ಹಳ್ಳಿಗಳ ಜನರಿಗೆ ವಾಸ ಮಾಡಲು ಬೇರೆ ದಾರಿ ಇಲ್ಲ, ಹುಟ್ಟಿ ಬೆಳೆದ ಊರು, ಕೇರಿ, ಭೂಮಿ, ಮನೆ ಮಠ ಫಲವತ್ತಾದ ಭೂಮಿ ಜಲಾವೃತವಾಗುತ್ತದೆ. ರೈತರು ಮನೆ
, ಹೊಲ ಕಳೆದುಕೊಂಡು ಅನಾಥರಾಗುತ್ತೇವೆ. ನಮಗೆ ಸರ್ಕಾರ ನೀಡುವ ಅಂಗೈ ಅಗಲ ಭೂಮಿ, ಮನೆ ಬೇಡ, ನಮ್ಮ ನಮ್ಮ ಹಳ್ಳಿಗಳಲ್ಲೇ ನಾವು ವಾಸ ಮಾಡುತ್ತೇವೆ. ನಮ್ಮ ಜಮೀನಿನಲ್ಲೇ ಬೆಳೆ ಬೆಳೆದು ಜೀವನ ಸಾಗಿಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ರೈತರು ಹೇಳಿದ್ದಾರೆ.

- Advertisement - 

ಕೋಟಿಗಟ್ಟಲೇ ಬೆಳೆ:
ಸಾಸಲು ಹೋಬಳಿಯಲ್ಲಿ ಸುಮಾರು 1,200 ಎಕರೆಯಲ್ಲಿ ಅಡಕೆ, 1,400 ಎಕರೆಯಲ್ಲಿ ತರಕಾರಿ
, ಜೋಳ, ರಾಗಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕ 20 ಕೋಟಿ ರೂ.ಗೂ ಹೆಚ್ಚು ಅಡಕೆ ವಹಿವಾಟು ಹಾಗೂ 10 ಕೋಟಿ ರೂ.ಗೂ ಹೆಚ್ಚು ರಾಗಿ, ಜೋಳ, ತರಕಾರಿ ಸೇರಿದಂತೆ ಇತರ ಬೆಳೆಗಳ ವಹಿವಾಟು ನಡೆಯುತ್ತದೆ ಎಂದು ರೈತ ನಿಯೋಗ ಮನವಿ ಪತ್ರದಲ್ಲಿ ತಿಳಿಸಿದೆ.

ತಜ್ಞರ ತಂಡ ರಚನೆ ಮಾಡಲಿ:
ರಾಜ್ಯ ಸರ್ಕಾರ ಕೂಡಲೇ ಸ್ಥಳ ಪರಿಶೀಲನೆಗೆ ತಜ್ಞರ ತಂಡ ರಚನೆ ಮಾಡಬೇಕು. ಈ ತಂಡ ವೈಜ್ಞಾನಿಕವಾದ ವರದಿ ನೀಡಬೇಕು. ಈ ಕುರಿತು ರಾಷ್ಟ್ರಪತಿ
, ಕೇಂದ್ರ ಸರ್ಕಾರ,‌ ರಾಜ್ಯ ಸರ್ಕಾರದ ಗಮನಕ್ಕೂ ತರಬೇಕು. ನಮ್ಮ ಊರಲ್ಲಿ ಡ್ಯಾಂ ನಿರ್ಮಾಣವಾಗದಂತೆ ತಡೆ‌ ಹಿಡಿಯಬೇಕು ಎಂದು ನಿಯೋಗ ಮನವಿ ಮಾಡಿತು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರೈತರ ಮನವಿ ಸ್ವೀಕರಿಸಿ‌ ಪ್ರತಿಕ್ರಿಯಿಸಿ, ರೈತರ ಮನವಿಯನ್ನು ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರದಿಂದ ವರದಿ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸಕಾರತ್ಮಕ ಭರವಸೆಯೊಂದಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಿರುವುದಾಗಿ ರೈತರು ಮಾಹಿತಿ ನೀಡಿದ್ದಾರೆ.

 

 

Share This Article
error: Content is protected !!
";