ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಿಜೆಪಿ ಮುಖಂಡ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಸಮರ ಆರಂಭವಾಗಿದೆ.
ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿರುವ ವಿಚಾರವೀಗ ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ.
ಜನಾರ್ದನ ರೆಡ್ಡಿ ಅವರು ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್ ಮಾಡಲು ಇಂತಹ ನೀಚ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ ಎಂದು ಏಕವಚನದಲ್ಲೇ ಭರತ್ ರೆಡ್ಡಿ ಕಿಡಿಕಾರಿದ್ದಾರೆ.
ಇದೆಲ್ಲದರ ನಡುವೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಸಾವಿಗೆ ಕಾರಣವಾದ ಬುಲೆಟ್ ಫೈರ್ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಶಾಸಕ ಭರತ್ ರೆಡ್ಡಿ ಆಪ್ತನ ಬಾಡಿ ಗಾರ್ಡ್ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಖಾಸಗಿ ಗನ್ ಮ್ಯಾನ್ಗಳ 3 ಗನ್ ಸೀಜ್ ಮಾಡಲಾಗಿದೆ. ಅವುಗಳನ್ನು ಪರಿಶೀಲನೆಗಾಗಿ ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಜನಾರ್ದನರೆಡ್ಡಿಗೆ ನೀಡಿದ್ದ ಗನ್ ಮ್ಯಾನ್ಗಳ ಗನ್ ಸಹ ಪರಿಶೀಲನೆ ನಡೆಸಲಾಗಿದ್ದು, ರೆಡ್ಡಿ ಗನ್ ಮ್ಯಾನ್ಗಳ ಗನ್ನಿಂದ ಬುಲೆಟ್ ಬಳಕೆ ಆಗದಿರುವುದು ಪತ್ತೆಯಾಗಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬಳ್ಳಾರಿ ಘರ್ಷಣೆ ಕುರಿತು ಪ್ರತಿಕ್ರಿಯೆ ನೀಡಿ, ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಬ್ಯಾನರ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯ ಗಲಾಟೆಯಾಗಿದೆ. ಜನಾರ್ದನರೆಡ್ಡಿ ಅವರ ಮನೆಯ ರಸ್ತೆಯಲ್ಲಿ ಬ್ಯಾನರ್ ಹಾಕಲು ಜನಾರ್ದನರೆಡ್ಡಿ ವಿರೋಧಿಸಿದ್ದಾರೆ ಎನ್ನಲಾಗಿದೆ.
ಆ ವಿಚಾರಕ್ಕೆ ಗಲಾಟೆ ನಡೆದು, ಕಾಂಗ್ರೆಸ್ನ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾನೆ. ಆ ವೇಳೆ ಯಾರು ಫೈರ್ ಮಾಡಿದ್ದಾರೆ ಎಂಬುದರ ಬಗ್ಗೆ ಸೂಕ್ತ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ವರದಿ ಬಂದ ಮೇಲೆ ಅಗತ್ಯ ಕ್ರಮ ವಹಿಸಲಾಗುವುದು.
ಮುನ್ನೆಚ್ಚರಿಕೆಯಾಗಿ ದಾವಣಗೆರೆ ಐಜಿ ಘಟನಾ ಸ್ಥಳಕ್ಕೆ ಹೋಗಿದ್ದು, ಖಾಸಗಿ ಗನ್ ಮ್ಯಾನ್ಗಳ ರಿವಾಲ್ವಾರ್ಗಳನ್ನು ಸೀಜ್ ಮಾಡಿದ್ದಾರೆ. ಶಾಸಕ ಸತೀಶ್ ರೆಡ್ಡಿ ಗನ್ ಮ್ಯಾನ್ ಫೈರ್ ಮಾಡಿದ್ದಾರೆ ಅಂತಾ ಹೇಳ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಗಲಾಟೆ ಮಾಡಿದ ವಿಚಾರಕ್ಕೆ ಜನಾರ್ದನ ರೆಡ್ಡಿ ಸೇರಿ 11 ಜನರ ವಿರುದ್ಧ ಎಫ್ಐಆರ್ ಆಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

