ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಮನೆ ಮನಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪಸರಿಸುವ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷ ಅವ್ವಾರು ಮಂಜುನಾಥ ಅಭಿಪ್ರಾಯಪಟ್ಟರು.
ಕಸಾಪ ಗ್ರಾಮೀಣ ಘಟಕವು ಶಿಕ್ಷಕ ಎಸ್ ಸತ್ಯನಾರಾಯಣ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ದಿ. ಎಸ್ ಯಮನಪ್ಪ ಅವರ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಡಿನಾಡಿನಲ್ಲಿ ನಿರಂತರವಾಗಿ ಕನ್ನಡ ಚಟುವಟಿಕೆಗಳು ನಡೆಯಲಿ ಈ ನಿಟ್ಟಿನಲ್ಲಿ 69 ವರ್ಷಗಳ ನಂತರ ಬಳ್ಳಾರಿ ಜಿಲ್ಲೆಗೆ ಬಂದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆದಷ್ಟು ಶೀಘ್ರ ನೆರವೇರಲಿ ಅದಕ್ಕೆ ತಮ್ಮ ಸಂಸ್ಥೆಯ ಸಂಪೂರ್ಣ ಸಹಕಾರವಿದೆ ಎಂದು ಅವ್ವಾರು ಮಂಜುನಾಥ ತಿಳಿಸಿದರು.
ಜೇಡರ ದಾಸಿಮಯ್ಯನವರ ವಚನಗಳಲ್ಲಿ ಆಧ್ಯಾತ್ಮದ ಜೊತೆಗೆ ಸಾಮಾಜಿಕ ಚಿಂತನೆ ಡಾಂಭಿಕತೆ ಮತ್ತು ಬೂಟಾಟಿಕೆಯ ವಿಡಂಬನೆ ಇದೆ ಎಂದು ಉಪನ್ಯಾಸಕಿ ಎಚ್. ಎಂ. ನೇತ್ರಾ ತಿಳಿಸಿದರು.
ಮಾಜಿ ಮಹಾಪೌರರಾದ ಶ್ರೀಮತಿ ಶ್ವೇತಾ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿಗಳಾದ ಬಿ ವೀರೇಶ್ ಮತ್ತು ಜಿ ಮನೋಹರ, ಕರ್ನಾಟಕ ಜನ ಸೈನ್ಯದ ಅಧ್ಯಕ್ಷ ಕೆ ಎರ್ರಿಸ್ವಾಮಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಜಿ.ವೈ. ತಿಪ್ಪಾರೆಡ್ಡಿ ಮತ್ತು ದತ್ತಿದಾನಿಗಳಾದ ಶ್ರೀಮತಿ ಎಸ್ ನಿರ್ಮಲಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಬಳ್ಳಾರಿ ಗ್ರಾಮೀಣ ಘಟಕದ ಅಧ್ಯಕ್ಷ ಎ ಎರ್ರಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಜನಪದ ಗಾಯಕ ಜಡೇಶ ಎಮ್ಮಿಗನೂರು ಭಾವ ಗೀತಗಾಯನ ನಡೆಸಿಕೊಟ್ಟರು.
ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ ಸತ್ಯನಾರಾಯಣ ಸ್ವಾಗತಿಸಿದರು. ಕಪ್ಗಗಲ್ಲು ಬಿ ಚಂದ್ರಶೇಖರ ಆಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

