ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆ ಮನೆಗೆ ಸುದ್ದಿ ಪತ್ರಿಕೆಗಳನ್ನು ನಿತ್ಯವೂ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದು ಎಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಎಚ್.ಅಶ್ವತ್ಥನಾರಾಯಣಗೌಡ ಹೇಳಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೆಯುಡಬ್ಲೂಜೆ ಸಭಾಂಗಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಸರಳವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿದರು.
ಗಾಳಿ, ಚಳಿ, ಮಳೆ, ಬಿಸಿಲು ಎನ್ನದೆ ಪ್ರತಿ ದಿನವೂ ಪತ್ರಿಕೆಯನ್ನು ಹಾಕುವುದು ಅಷ್ಟು ಸುಲುಭದ ಮಾತಲ್ಲ. ಶ್ರಮದಾಯಕ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವಿತರಕರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಲಿ ಎಂದು ಆಶಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೇಷಾ ಖಾನಂ ಮಾತನಾಡಿ, ಸುದ್ದಿ ಮನೆಯಲ್ಲಿ ಪತ್ರಿಕಾ ವಿತರಕು ಬಹಳ ಮುಖ್ಯವಾದ ಕೊಂಡಿ. ನಾವು ಸುದ್ದಿ ಮಾಡಿದರೂ, ಅವು ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ಮನೆ ಮನೆಗೆ ತಲುಪಿಸುವ ಕಾಯಕ ಮಾಡುವ ಪತ್ರಿಕಾ ವಿತರಕರ ಸೇವೆ ಅಭಿನಂದನೀಯ ಎಂದು ಹೇಳಿದರು.
ರಾಜ್ಯ ಸರ್ಕಾರ ಕೂಡ ಪತ್ರಿಕಾ ವಿತರಕರ ಬಗ್ಗೆ ಒಂದಿಷ್ಟು ಗಮನಹರಿಸಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆಯಲ್ಲಿಯೂ ಪತ್ರಿಕೆಗಳು ಪ್ರಯಾಣಿಕರ ಕೈಗೆ ಸಿಗುವಂತ ವ್ಯವಸ್ಥೆ ಆಗಬೇಕು. ಆ ಮೂಲಕ ವಿತರಕರಿಗೂ ಉದ್ಯೋಗ ಲಭ್ಯವಾಗಬೇಕು ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮೂರು ದಶಕಗಳಿಗೂ ಹೆಚ್ಚ ಕಾಲದಿಂದ ವಿತರಕ ಕೆಲಸ ಮಾಡಿಕೊಂಡು ಬಂದಿರುವ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಪಿ.ಸುರೇಶ್, ರಮೇಶ್ ಕುಮಾರ್, ಎಂ.ಟಿ.ಗೋಪಾಲ್ ಅವರನ್ನು ಕೆಯುಡಬ್ಲೂಜೆ ವತಿಯಿಂದ ಸನ್ಮಾನಿಸಲಾಯಿತು.

