ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲ ನಾಯಕರು ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು ಎಂದು ಬಯಸುತ್ತಾರೆ. ಆದರೆ, ಇತರ ಕೆಲ ನಾಯಕರು ಶಿವಕುಮಾರ್ ಅವರೇ ಮುಂದುವರಿಯಬೇಕು ಎಂದು ಹೇಳುತ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಹೈಕಮಾಂಡ್ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಎರಡನೇ ಅವಧಿಗೆ ಮುಂದುವರಿಯಲು ನನಗೆ ಅವಕಾಶ ನೀಡಿತು ಎಂದು ಪರಮೇಶ್ವರ ತಿಳಿಸಿದರು.
ನಿಮ್ಮ ಮತ್ತು ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಬಹುದು ಮತ್ತು ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಾವು ತುಂಬಾ ಒಳ್ಳೆಯ ಸ್ನೇಹಿತರು ಎಂದು ತಿಳಿಸಿದರು.
ಪಕ್ಷದ ಆಂತರಿಕ ವಿವಾದಗಳ ಬಗ್ಗೆ ನನಗೆ ತಿಳಿದಿಲ್ಲ. ಆಂತರಿಕ ವಿವಾದಗಳಿವೆ ಎನ್ನುವುದನ್ನ ಮಾಧ್ಯಮಗಳು ಸೃಷ್ಟಿಸಿದಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಮತ್ತು ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ ಗೃಹ ಸಚಿವರು, ಸಣ್ಣ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವು ಆಂತರಿಕ ಸಂಘರ್ಷಗಳಿಗೆ ಕಾರಣವಾಗುವುದಿಲ್ಲ ಎಂದು ತಿಳಿಸಿದರು.
ದೆಹಲಿಯ ಕರ್ನಾಟಕ ಭವನ ಉದ್ಘಾಟನೆ ಮತ್ತು ತುಮಕೂರಿನಲ್ಲಿ ನಡೆದ ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ, ದೆಹಲಿಯ ಕರ್ನಾಟಕ ಭವನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದು ನಾನೇ. ಈಗ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಆ ಸಮಯದಲ್ಲಿ ನಾನು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ವಿವಿಧ ಕಾರಣಗಳಿಗಾಗಿ, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಆಹ್ವಾನವಿಲ್ಲದೆ, ನವದೆಹಲಿಗೆ ಪ್ರಯಾಣಿಸಿ ಆ ಕಾರ್ಯಕ್ರಮಕ್ಕೆ ಹೇಗೆ ಹಾಜರಾಗಲು ಸಾಧ್ಯ? ಎಂದು ಪರಮೇಶ್ವರ್ ಪ್ರಶ್ನಿಸಿ, ಈ ಕಾರಣಕ್ಕಾಗಿ ನಾನು ದೆಹಲಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಸಂಪುಟವನ್ನು ಪ್ರತಿನಿಧಿಸುತ್ತಾರೆ ಮತ್ತು ನನ್ನ ವೈಯಕ್ತಿಕ ಉಪಸ್ಥಿತಿಯ ಅಗತ್ಯವಿರಲಿಲ್ಲ ಎಂದು ಅವರು ತಿಳಿಸಿದರು.
ಇನ್ನೂ ಸಿದ್ದಗಂಗಾ ಮಠದ ಕಾರ್ಯಕ್ರಮದ ಬಗ್ಗೆ ಮಾತು ಮುಂದುವರೆಸಿದ ಪರಮೇಶ್ವರ್, ಸಿದ್ದಗಂಗಾ ಮಠದೊಂದಿಗೆ ನನ್ನ ಕುಟುಂಬ ಉತ್ತಮ ಸಂಬಂಧ ಹೊಂದಿದೆ. ದಿವಂಗತ ಶಿವಕುಮಾರ ಸ್ವಾಮೀಜಿ ಅವರೊಂದಿಗೂ ನನ್ನ ತಂದೆಗೂ ನಿಕಟ ಸಂಬಂಧವಿತ್ತು. ಕಾರ್ಯಕ್ರಮದ ಸಮಯದಲ್ಲಿ ನಾನು ಬೇರೆ ಕಾರ್ಯದಲ್ಲಿ ನಿರತನಾಗಿದ್ದೆ. ನನಗೆ ಅನಿಸಿದಾಗಲೆಲ್ಲಾ ಮಠಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಹಂತದಲ್ಲಿ, ಹನಿ ಟ್ರ್ಯಾಪ್ ಪ್ರಕರಣ ಮತ್ತು ಸಚಿವ ರಾಜಣ್ಣ ಅವರ ಪುತ್ರ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ದಾಖಲಿಸಿರುವ ಕೊಲೆ ಯತ್ನ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು.