ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಮೀನಿನ ಮೂಲ ದಾಖಲೆಗಳು ನಾಶ ಹಾಗೂ ದುರಪಯೋಗವಾಗುವುದನ್ನು ತಡೆಯಲು ‘ಭೂ ಸುರಕ್ಷಾ‘ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಯಡಿ 63.58 ಕೋಟಿ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ರೈತರು ಆನ್ಲೈನ್ ಮೂಲಕವೇ ಹಳೆಯ ಕಂದಾಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಪಡೆಯಬಹುದಾಗಿದೆ. ಇದರಿಂದ ಅನಗತ್ಯವಾಗಿ ತಾಲ್ಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯಬಾರದು ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಬೇಕು ಎಂಬುದು ಸರ್ಕಾರದ ಗುರಿ. ಇದಕ್ಕಾಗಿಯೇ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿದ್ದೇವೆ. ದಾಖಲೆಗಳಿಲ್ಲದ ತಾಂಡಾ, ಹಟ್ಟಿ, ಹಾಡಿ ಹಾಗೂ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ, ಇಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷಗಳಲ್ಲಿ 2,20,000 ಕುಟುಂಬಗಳಿಗೆ ಹಕ್ಕು ಪತ್ರ ತಲುಪಿಸುವ ಗುರಿ ಇಟ್ಟುಕೊಂಡಿದೆ. ಕಳೆದ ವರ್ಷ ಹೊಸಪೇಟೆ ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 1.20 ಲಕ್ಷ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ಬರುವ ಫೆಬ್ರವರಿ 14 ರಂದು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲುವ ಮೂಲಕ ಏಕಕಾಲಕ್ಕೆ ಉಳಿದ 1.10 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಕ್ಕು ಪತ್ರದ ಜೊತೆಗೆ ಸಬ್ರಿಜಿಸ್ಟಾರ್ ಕಚೇರಿಯಲ್ಲಿ ಜಾಗದ ನೊಂದಣಿ ಸಹ ಮಾಡಿಕೊಡಲಾಗುತ್ತಿದೆ. ಇದರ ಆಧಾರದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ‘ಇ-ಸ್ವತ್ತು‘ ನೋಂದಣಿ ಮಾಡಿಸುವ ಮೂಲಕ ನಿವಾಸಿಗಳಿಗೆ ಶೇ. 100 ರಷ್ಟು ಮಾಲೀಕತ್ವದ ಗ್ಯಾರಂಟಿಯನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಆಸ್ತಿಗಳ ಮೇಲೆ ಸಾಲ ಸೌಲಭ್ಯ ಪಡೆಯಲು ಅಥವಾ ಮಾರಾಟ ಮಾಡಲು ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಕಾನೂನುಬದ್ಧ ಮಾಲೀಕತ್ವ ಹಕ್ಕು ಸಿಗಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
11 ಲಕ್ಷ ಪೌತಿ ಖಾತೆಗಳ ಬದಲಾವಣೆ :
ಜಮೀನುಗಳ ನಕಲಿ ವ್ಯವಹಾರ ಮತ್ತು ವಂಚನೆಗಳನ್ನು ತಡೆಯಲು ಆರ್ಟಿಸಿ (ಖಖಿಅ) ದಾಖಲೆಗಳಿಗೆ ಮಾಲೀಕರ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಈ ವೇಳೆ ರಾಜ್ಯದಾದ್ಯಂತ 49 ಲಕ್ಷ ಜಮೀನು ಖಾತೆಗಳು ಮೃತ ಹೆಸರಿನಲ್ಲಿರುವುದು ಬೆಳಕಿಗೆ ಬಂದಿತು. ಅಭಿಯಾನದ ಮಾದರಿಯಲ್ಲಿ ಪೌತಿ ಖಾತೆಗಳ ಬದಲಾವಣೆ ಸರ್ಕಾರ ಮುಂದಾಗಿದ್ದು, ಮೃತಪಟ್ಟ ಮಾಲೀಕರ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರಿಗೆ ವರ್ಗಾಯಿಸಲು ‘ಇ-ಪೌತಿ’ ಆಂದೋಲನ ನಡೆಸಲಾಗುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಹಳ್ಳಿಗಳ ಮನೆಬಾಗಿಲಿಗೆ ತೆರಳಿ ಇ-ಕೆವೈಸಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದುವರೆಗೆ ರಾಜ್ಯಾದ್ಯಂತ 11 ಲಕ್ಷಕ್ಕೂ ಅಧಿಕ ಖಾತೆ ಬದಲಾವಣೆ ಮಾಡಲಾಗಿದೆ. ಇದರಿಂದ ಜಮೀನಿನ ನೈಜ ಮಾಲೀಕರಿಗೆ ಸುರಕ್ಷತೆ ಸಿಗಲಿದ್ದು, ಬೇನಾಮಿ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ. ಪೌತಿ ಖಾತೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲು ಹಾಗೂ ಕೆಲಸದ ದಕ್ಷತೆ ಹೆಚ್ಚಿಸಲು ಕಂದಾಯ ನಿರೀಕ್ಷಕರಿಗೆ ಲ್ಯಾಪ್ಟಾಪ್ ವಿತರಿಸಲು ಸರ್ಕಾರದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಮುಂಬರುವ ಬಜೆಟ್ನಲ್ಲಿ ರೂ.5 ಕೋಟಿ ಮೀಸಲಿಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಬಾಕಿ ಪ್ರಕರಣಗಳ ವಿಲೇವಾರಿ:
ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಹಂತದಲ್ಲಿ 10,774 ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ 73,624 ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 25 ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಹುತೇಕ ಅವಧಿ ಮೀರಿದ ಪ್ರಕರಣಗಳು ವಿಲೇವಾರಿಯಾಗಿದ್ದು, ತಹಶೀಲ್ದಾರ್ ನ್ಯಾಯಾಲಯದಲ್ಲಿ 488 ಪ್ರಕರಣ ಹಾಗೂ ಉಪವಿಭಾಗಧಿಕಾರಿಗಳ ನ್ಯಾಯಾಲಯದಲ್ಲಿ 11,800 ಪ್ರಕರಣಗಳು ಬಾಕಿ ಉಳಿದಿವೆ. ಹಿಂದೆ ಪ್ರಕರಣವೊಂದರ ವಿಲೇವಾರಿಗೆ ಸರಾಸರಿ 250 ದಿನಗಳು ಬೇಕಾಗುತ್ತಿದ್ದವು. ಈಗ ಆ ಅವಧಿಯನ್ನು 84 ದಿನಗಳಿಗೆ ತಗ್ಗಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಹೊಸ ತಾಲೂಕುಗಳಿಗೆ ‘ಪ್ರಜಾಸೌಧ‘ದ ಭಾಗ್ಯ:
ಹೊಸದಾಗಿ ಘೋಷಣೆಯಾದ 63 ಹೊಸ ತಾಲೂಕುಗಳ ಪೈಕಿ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 14 ತಾಲ್ಲೂಕುಗಳಿಗೆ ಕಚೇರಿಗಳು ಮಂಜೂರಾತಿ ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಉಳಿದ 49 ತಾಲೂಕುಗಳಲ್ಲಿ ‘ಪ್ರಜಾಸೌಧ‘ ಹೆಸರಿನಡಿ ಸುಸಜ್ಜಿತ ಕಚೇರಿ ಕಟ್ಟಡಗಳನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಈ ಪ್ರಜಾಸೌಧಗಳು ಸಾರ್ವಜನಿಕ ಸೇವೆಗೆ ಸಿದ್ಧವಾಗಲಿವೆ.
ಕೇಂದ್ರ ಸರ್ಕಾರದ ಸೂಚನೆಯಂತೆ ದೇಶದಲ್ಲಿ ಜನಗಣತಿ ಪ್ರಕ್ರಿಯೆ ಆರಂಭವಾಗಿರುವುದರಿಂದ, ಹೊಸ ಜಿಲ್ಲೆ ಅಥವಾ ತಾಲೂಕುಗಳ ರಚನೆಯ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಜನಗಣತಿ ಮುಗಿಯುವವರೆಗೆ ಯಾವುದೇ ಆಡಳಿತಾತ್ಮಕ ಗಡಿ ಬದಲಾವಣೆ ಮಾಡಲು ಅವಕಾಶವಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ರೈತರ ಪೋಡಿ ಕೆಲಸಕ್ಕೆ ವೇಗ:
ಬಡ ರೈತರು ಪಕ್ಕಾ ದಾಖಲೆ ಮತ್ತು ಸರ್ವೆ ಸ್ಕೆಚ್ಗಾಗಿ ಪರದಾಡುವುದನ್ನು ತಪ್ಪಿಸಲು ಸರ್ಕಾರವೇ ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ದಾಖಲೆಯ 1,89,499 ರೈತರ ಜಮೀನುಗಳ ಪೋಡಿ ಮತ್ತು ದರಖಾಸ್ತು ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಈ ಹಿಂದೆ 2013-18ರ ಅವಧಿಯಲ್ಲಿ ಕೇವಲ 5,800 ಮತ್ತು ವಿಲೇವಾರಿಯಾಗಿದ್ದವು. ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ಗ್ರಾಮ ಮಟ್ಟದವರೆಗೆ ಇಲಾಖೆಯ ಕೆಲಸಗಳಲ್ಲಿ ವಿಳಂಬ ಧೋರಣೆ ಹೋಗಲಾಡಿಸಲು ಇ-ಆಫೀಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ರೈತರ ಅರ್ಜಿಗಳು ಎಲ್ಲಿ ಬಾಕಿ ಇವೆ ಎಂಬುದನ್ನು ಡಿಜಿಟಲ್ ಮೂಲಕ ಪತ್ತೆ ಹಚ್ಚಬಹುದಾಗಿದ್ದು, ಅಧಿಕಾರಿಗಳು ತ್ವರಿತವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಗ್ರಾಮದ ನಕ್ಷೆಯಲ್ಲಿ ದಾರಿ ಇದ್ದು, ಅದನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತಹ ದಾರಿಯನ್ನು ತಕ್ಷಣವೇ ತೆರವುಗೊಳಿಸುವುದು ಕಂದಾಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ ಖಾಸಗಿ ಜಮೀನುಗಳ ಮೂಲಕ ಹಾದು ಹೋಗುವ ವಾಡಿಕೆ ರಸ್ತೆಗಳ ಪ್ರಕರಣಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಆದಾಗ್ಯೂ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಾರದೆAಬ ದೃಷ್ಟಿಯಿಂದ ಬಿತ್ತನೆ ಬೀಜ, ಗೊಬ್ಬರ ಸಾಗಿಸಲು ಮತ್ತು ಬೆಳೆಗಳನ್ನು ಸಾಗಿಸಲು ದಾರಿ ಕಲ್ಪಿಸಿಕೊಡಲು ತಹಶೀಲ್ದಾರ್ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.
ಚಿತ್ರದುರ್ಗದ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಿ, ರಸ್ತೆ ಮತ್ತು ನೀರಿನ ಸೌಲಭ್ಯ ಒದಗಿಸಲಾಗಿದೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಹೊಸ ಕಚೇರಿಯು ನಗರದಿಂದ ದೂರವಿರುವ ಕಾರಣ ಸ್ಥಳಾಂತರದ ಬಗ್ಗೆ ಸಾರ್ವಜನಿಕರಲ್ಲಿಕೇಳಿಬರುತ್ತಿರುವ ಅಸಮಾಧಾನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹೊಸ ಕಟ್ಟಡ ಹಾಗೂ ಸ್ಥ್ಥಳವನ್ನು ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಎಂದು ಎಂದು ಸಚಿವ ಕೃಷ್ಣ ಭೈರೇಗೌಡ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಯೋಗಿಶ್ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

