ಚಂದ್ರವಳ್ಳಿ ನ್ಯೂಸ್, ಅಥಣಿ:
“ಶಾಸಕ ಲಕ್ಷ್ಮಣ್ ಸವದಿ ಅವರು ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬ ವದಂತಿಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು. ಅವರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮರಳುವುದಿಲ್ಲ, ಅಂತಹ ಪ್ರಸಂಗ ಎದುರಾಗಲು ನಾವು ಬಿಡುವುದಿಲ್ಲ,” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಅಥಣಿಯಲ್ಲಿ ದಲಿತ ಮುಖಂಡ ಗೌತಮ್ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸವದಿ ವಿರುದ್ಧ ವಾಗ್ದಾಳಿ: ಲಕ್ಷ್ಮಣ್ ಸವದಿ ಅವರು ಕೇವಲ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ ತಾವೇ ಮರಳಿ ಬಿಜೆಪಿಗೆ ಬರುತ್ತೇನೆ ಎಂಬ ವಾತಾವರಣವನ್ನು ಅವರೇ ಸೃಷ್ಟಿಸುತ್ತಿದ್ದಾರೆ. ಆದರೆ ಅಂತಹ ಬೆಳವಣಿಗೆ ಸಾಧ್ಯವಿಲ್ಲ. ಒಂದು ವೇಳೆ ಹಾಗೇನಾದರೂ ಆದರೆ, ಆ ಸಂದರ್ಭದಲ್ಲಿ ದೇವರು ನೀಡುವ ಬುದ್ಧಿಯಂತೆ ನಾವು ಪ್ರತಿಕ್ರಿಯಿಸುತ್ತೇವೆ ಎಂದು ಎಚ್ಚರಿಸಿದರು.
ಚುನಾವಣಾ ಸಿದ್ಧತೆಗೆ ಕರೆ: ಕಾರ್ಯಕರ್ತರು ವದಂತಿಗಳಿಗೆ ತಲೆಕೆಡಿಸಿಕೊಳ್ಳದೆ ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ 2028ರ ವಿಧಾನಸಭಾ ಚುನಾವಣೆಗೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ಸೂಚಿಸಿದರು. 2018ರ ಯಶಸ್ಸನ್ನು ಮರುಕಳಿಸುವಂತೆ ಕೆಲಸ ಮಾಡಲು ಹುರಿದುಂಬಿಸಿದರು.
ಯತ್ನಾಳ್ ಪರ ಬ್ಯಾಟಿಂಗ್: ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮರಳಿ ಪಕ್ಷಕ್ಕೆ ಬಂದರೆ ಹಿಂದೂ ಸಂಘಟನೆ ಮತ್ತು ಬಿಜೆಪಿಗೆ ಆನೆಬಲ ಬರಲಿದೆ. ಅವರು ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತಿರುವುದು ಶುಭ ಸೂಚನೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು.
ವಿಜಯೇಂದ್ರ ಬಗ್ಗೆ ಮೃದು ಧೋರಣೆ: ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಗ್ಗೆ ರಮೇಶ್ ಜಾರಕಿಹೊಳಿ ಸಾಫ್ಟ್ ಕಾರ್ನರ್ ಪ್ರದರ್ಶಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಹಿಂದುತ್ವವೇ ಸಿದ್ಧಾಂತ: ಕಾಂಗ್ರೆಸ್ನ ಟೀಕೆಗೆ ಉತ್ತರಿಸಿದ ಅವರು, “ನಮ್ಮ ಪಕ್ಷದ ಮೂಲ ಸಿದ್ಧಾಂತವೇ ಹಿಂದುತ್ವ. ಮುಸ್ಲಿಮರು ನಮ್ಮ ಸಿದ್ಧಾಂತ ಒಪ್ಪದ ಕಾರಣ ನಮಗೆ ಮತ ಹಾಕುವುದಿಲ್ಲ, ಆದರೆ ನಾವು ಅವರನ್ನು ದ್ವೇಷಿಸುವುದಿಲ್ಲ. ಹಿಂದೂ ಸಮಾಜವೇ ನಮ್ಮ ಶಕ್ತಿ,” ಎಂದರು.
”ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ.”
ರಮೇಶ್ ಜಾರಕಿಹೊಳಿ.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಬಗ್ಗೆ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದು, ಶೀಘ್ರದಲ್ಲೇ ಚುನಾವಣೆಗಳು ನಡೆಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

