ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾಸಗಿ ಶಾಲಾ ಕಾಲೇಜುಗಳು ಸರ್ಕಾರದ ಎಲ್ಲ ಮಾರ್ಗಸೂಚಿ, ಕಾನೂನುಗಳನ್ನು ಉಲ್ಲಂಘಿಸಿ ಲಕ್ಷಾಂತರ ಶುಲ್ಕ ಏರಿಕೆ ಮಾಡಿ ಸುಲಿಗೆ ಮಾಡುತ್ತಿದ್ದು ರಾಜ್ಯ ಸರ್ಕಾರ ಕಡಿವಾಣ ಹಾಕಲು ಸಿದ್ಧತೆ ಮಾಡಿಕೊಂಡಿ.
ಖಾಸಗಿ ಶಾಲಾ ಕಾಲೇಜ್ ಗಳಿಗೆ ಕಡಿವಾಣ ಹಾಕುವಂತೆ ಪೋಷಕರು ಪ್ರತಿ ವರ್ಷ ಆಯಾಯ ಜಿಲ್ಲಾಡಳಿತ, ಡಿಡಿಪಿಐ ಸೇರಿದಂತೆ ಮತ್ತಿತರರಿಗೆ ಆಗ್ರಹಿಸುತ್ತಿದ್ದರೂ ಏನು ಪ್ರಯೋಜನ ಆಗಿರಲಿಲ್ಲ. ಇಂತಹ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯ ಪಠ್ಯಕ್ರಮ ಸಮಿತಿ ಪ್ರೊಫೆಸರ್ ಥೋರಟ್ ನೇತೃತ್ವದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶುಲ್ಕ ನಿಯಂತ್ರಣ ವಿಚಾರದಲ್ಲಿ ಕಾಯ್ದೆ ರೂಪಿಸಲು ಪ್ರತ್ಯೇಕ ಸಮಿತಿ ರಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರೊಂದಿಗೆ, ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ಶಿಕ್ಷಣ ಇಲಾಖೆ ತಯಾರಿ ಮಾಡಿದೆ.
ಪ್ರತ್ಯೇಕ ಶಾಲಾ ಶುಲ್ಕ ನಿಯಂತ್ರಣ ಮಂಡಳಿಗೆ ಎಸ್ಇಪಿ ಶಿಫಾರಸು ಮಾಡಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೂ ವರದಿ ಸಲ್ಲಿಸಿದೆ. ಈ ವರದಿಯಲ್ಲಿ, ಶಾಲಾ ಹಂತದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಖಾಸಗಿ ಶಾಲಾ ಕಾಲೇಜುಗಳು ಆಡಿದ್ದೇ ಆಟ ಎಂಬಂತಾಗಿದೆ. ಅವರು ನಿಗದಿ ಮಾಡಿದ್ದೇ ಶುಲ್ಕ ಎನ್ನುವಂತಾಗಿದೆ. ಪ್ರತಿವರ್ಷ ಶೇ 20 ರಿಂದ 30 ರಷ್ಟು ಶುಲ್ಕ ಏರಿಕೆ ಮಾಡಿಕೊಂಡು ಪೋಷಕರು ಮತ್ತು ಮಕ್ಕಳನ್ನು ಸುಲುಗೆ ಮಾಡಲಾಗುತ್ತಿತ್ತು. ಹೀಗಾಗಿ ಎಸ್ಇಪಿ ಖಾಸಗಿ ಶಾಲಾ ಕಾಲೇಜುಗಳ ಶುಲ್ಕಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಎಸ್ಇಪಿ ಮಾಡಿರುವ ಶಿಫಾರಸಿಗೆ ಕೆಲವು ಖಾಸಗಿ ಶಾಲಾ ಒಕ್ಕೂಟಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಸರ್ಕಾರ ಮುಂದಿನ ವರ್ಷದಿಂದಲೇ ಸಮಿತಿ ರಚಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

