ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುರಂಗ ರಸ್ತೆ ಮಾರ್ಗದಿಂದ ಜಲಮೂಲ, ಅಂತರ್ಜಲ, ಕೊಳವೆಬಾವಿಗೆ ಧಕ್ಕೆ ಆಗುವುದರ ಜೊತೆಯಲ್ಲಿ ನಗರದ ಪರಿಸರಕ್ಕೆ ದೊಡ್ಡಮಟ್ಟದ ಪೆಟ್ಟು ಬೀಳಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ನಗರದ ಶ್ವಾಸಕೋಶಗಳಿಗೆ ಹಾನಿ ಆಗಲಿದೆ. ಟ್ರಾಫಿಕ್ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ ಅವರೇ, ಇಷ್ಟೆಲ್ಲ ಬಾಧಕಗಳಿರುವ ಸುರಂಗ ರಸ್ತೆಯನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಯಾಕೆ ಬಿದ್ದಿದ್ದೀರಿ?
ಐಐಎಸ್ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರ ವಾದಿಗಳು, ನಾಗರೀಕರು ಎಷ್ಟೇ ವಿರೋಧ ಮಾಡುತ್ತಿದ್ದರೂ ಸುರಂಗ ರಸ್ತೆ ಬಗ್ಗೆ ನಿಮಗೆ ಅಷ್ಟು ಅಚಲ ಆಸಕ್ತಿ ಯಾಕೆ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ? ಇದರಲ್ಲಿ ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ಕಮಿಷನ್ ಪಾಲೆಷ್ಟು? ಉತ್ತರ ಕೊಡಿ ಸ್ವಾಮಿ.
ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಹಠಕ್ಕೆ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ಡುವ ಅವೈಜ್ಞಾನಿಕ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ ಎಂದು ಅಶೋಕ್ ಎಚ್ಚರಿಸಿದ್ದಾರೆ.

