ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಿತ್ತು ತಿನ್ನುವ ಬಡತನ ಇದ್ದರೂ ನೂರಾರು ಕನಸು ಹೊತ್ತು ಪಿಎಸ್ಐ ಪರೀಕ್ಷೆ ಬರೆದು ಉತ್ತೀರ್ಣರಾಗಿ ಭವಿಷ್ಯ ಕಟ್ಟಿಕೊಳ್ಳುವ ತವಕದಲ್ಲಿದ್ದವರು ಸ್ಮಶಾನದ ಹಾದಿ ಹಿಡಿದಿದ್ದಾರೆ.
ಬಡತನ ಕುಟುಂಬವಿದ್ದರೂ ಸಾಧನೆ ಮಾಡಬೇಕೆಂಬ ಹಂಬಲ ಎಲ್ಲರಲ್ಲೂ ಹೆಚ್ಚಾಗಿಯೇ ಇರುತ್ತದೆ. ಪಿಎಸ್ಐ ಆಗಬೇಕೆಂಬ ಕನಸನ್ನು ಹಗಲುರಾತ್ರಿ ಎನ್ನದೆ ಅಭ್ಯಾಸ ಮಾಡಿ 2023ರಲ್ಲಿ ಪರೀಕ್ಷೆ ಬರೆದು ತಮ್ಮ ಆಸೆ ಈಡೇರಿಸಿಕೊಳ್ಳುವತ್ತ ಸಾಗಿದ್ದರು. ಆದರೆ, ಜವರಾಯನ ಅಟ್ಟಹಾಸಕ್ಕೆ ಮೂರು ಜೀವಗಳು ಬಲಿಯಾದ ಘಟನೆ ಭಾನುವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ರಾಯಚೂರು ಮೂಲದ ಅಮರೇಶ್ ಬರ್ಗಿ(29), ತೀರ್ಥಹಳ್ಳಿಯ ಸಚ್ಚಿನ್(29), ಬಳ್ಳಾರಿಯ ಮಂಜುನಾಥಧಾರಿಮಣಿ(32) ಸ್ಥಳದಲ್ಲೇ ಸಾವನಪ್ಪಿ, ಬೆಳಗಾವಿಯ ಮಹಂತೇಶ್(30), ಶಿವಮೊಗ್ಗ ಜಿಲ್ಲೆಯ ಉರುಳಗಲ್ಲು ಗ್ರಾಮದ ಸಿವಿಲ್ ಪಿಎಸ್ಐ ಎಲ್.ಈಶ್ವರ(28) ತೀರ್ವವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಶಸಸ್ತ್ರ ಮೀಸಲುಪಡೆಯ ಸಬ್ಇನ್ಸ್ಪೆಕ್ಟರ್(ಆರ್.ಎಸ್ಐ)ಗಳಾಗಿ ಆಯ್ಕೆಗೊಂಡ ಇವರು ಪ್ರೊಫೆಷನರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ತಿಂಗಳೊಳಗೆ ಪ್ರೊಫೆಷನರಿ ಮುಗಿಸಿ ಹಲವಾರು ಕೇಂದ್ರಗಳಿಗೆ ಹೋಗಲು ಸಿದ್ದತೆ ನಡೆಸಿದ್ದರು ಎನ್ನಲಾಗಿದೆ.
ಜೊತೆಯಲ್ಲೇ ಆರ್.ಎಸ್.ಐಗೆ ಆಯ್ಕೆಗೊಂಡ ಸ್ನೇಹಿತ ವೀರೇಶ ಎಂಬುವವರ ವಿವಾಹ ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಭಾನುವಾರ ನಡೆಯುತ್ತಿತ್ತು. ಈ ವಿವಾಹ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಐವರು ಖುಷಿ, ಖುಷಿಯಿಂದಲೇ ಬೆಳಿಗ್ಗೆ ಹೊರಟಿದ್ದರು. ಆದರೆ, ತಾಲ್ಲೂಕಿನ ಹೆಗ್ಗೆರೆ ಬಳಿ ಚಳ್ಳಕೆರೆ ಕಡೆಗೆ ಬರುತ್ತಿದ್ದ ಲಾರಿಗೆ ಇವರ ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಲಾರಿಕೆಳಗೆ ಸಿಕ್ಕಿಕೊಂಡಿದೆ. ಅದನ್ನು ಗಮನಿಸದ ಲಾರಿ ಚಾಲಕ ಸುಮಾರು ದೂರು ಕಾರನ್ನು ಎಳೆದುಕೊಂಡು ಬಂದ ಪರಿಣಾಮ ಮೂವರು ಸಾವನಪ್ಪಿ ಮತ್ತಿಬ್ಬರ ಚೇತರಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಪ್ರೊಫೆಷನರಿ ಡಿಕ್ಲಿಯರ್ ಆಗುವಹಂತದಲ್ಲಿದ್ದ ಮಂಜುನಾಥ ಧಾರಿಮಣಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭದ್ರತೆಯಲ್ಲಿ, ಸಚಿನ್ ಬೆಂಗಳೂರು ಸಿಟಿ ವಿವಿಐಪಿ ಸೆಕ್ಯೂರಿಟಿಯಾಗಿ, ಅಮರೇಶ್ ಬರ್ಗಿ ಸಿಎಆರ್ ಪಶ್ಚಿಮ, ಮಹಾಂತೇಶ್ ಸಿಎಆರ್ ಉತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಹೆಗ್ಗೆರೆ ಬಳಿ ನಡೆದ ಅಪಘಾತದಲ್ಲಿ ಸಾನವಪ್ಪಿದ ಮೂವರು, ಗಾಯಗೊಂಡ ಇಬ್ಬರು ಅವಿವಾಹಿತರು.
ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಸಚ್ಚಿನ್: ಪಿಎಸ್ಐ ಹುದ್ದೆ ಪಡೆದು ಮದುವೆಯಾಗಬೇಕೆಂಬ ಕನಸುಕಂಡಿದ್ದ ಸಚ್ಚಿನ್ ಕಳೆದ ಎರಡ್ಮೂರು ತಿಂಗಳ ಹಿಂದೆಯೇಯಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಮುಂದಿನ ತಿಂಗಳು ಮದುವೆ ನಿಶ್ಚಯವಾಗಿತ್ತು ಎಂದು ಸ್ನೇಹಿತ ಮಂಜು ತಿಳಿಸುತ್ತಾರೆ.
ಆಕ್ರಂದನ : ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದ ಲಾರಿ-ಕಾರು ಡಿಕ್ಕಿಯಲ್ಲಿ ಮೂವರು ಶಸಸ್ತ್ರ ಮೀಸಲುಪಡೆಯ ಸಬ್ಇನ್ಸ್ಪೆಕ್ಟರ್(ಆರ್.ಎಸ್ಐ)ಗಳು ಸಾವನಪ್ಪಿದ ಸುದ್ದಿ ತಿಳಿದು ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಕಷ್ಟಪಟ್ಟು ಓದಿಸಿ, ನೂರಾರು ಕನಸು ಹೊತ್ತು ಪೊಲೀಸ್ ಹುದ್ದೆಗೆ ಕಳಿಸಿದ ಬದುಕು ಕಮರಿತು ಎಂದು ಗೋಳಾಡಿದರು.
ಲಾರಿ ಚಾಲಕನ ಸ್ಪಷ್ಟಣೆ:
ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದ ಅಪಘಾತಕ್ಕೀಡಾದ ಲಾರಿ ಚಾಲಕ ಜಾರ್ಖಂಡ್ ಮೂಲದ ಲಾರಿ ಚಾಲಕ ಇಮಾಮುದ್ದೀನ್ ಪ್ರತಿಕ್ರಿಯಿಸಿ ಖಾಲಿ ಲಾರಿಯನ್ನು ಬಳ್ಳಾರಿಗೆ ಕೊಂಡೊಯ್ಯುತ್ತಿದ್ದೆನು. ತುಮಕೂರಿನಿಂದ ಬಳ್ಳಾರಿಯ ಜಿಂದಾಲ್ ಗೆ ನಿಧಾನವಾಗಿ ಒಂದೇ ಬದಿಯಲ್ಲಿ ತೆರಳುತ್ತಿದ್ದೆನು. ಹಿಂಬದಿಯಿಂದ ಕಾರು ಡಿಕ್ಕಿಯಾಗಿರುವುದು ತಿಳಿದತಕ್ಷಣ ಲಾರಿನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾನೆ.
ಗೃಹಸಚಿವರ ಭೇಟಿ :
ಸುದ್ದಿ ತಿಳಿಯುತ್ತಲೇ ತುಮಕೂರಿನಿಂದ ಅಪಘಾತವಾದ ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಪಘಾತದಲ್ಲಿ 3 ಆರ್.ಎಸ್.ಐಗಳು ಸಾವನಪ್ಪಿ, ಇಬ್ಬರುಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಎಲ್ಲರೂ ಇತ್ತೀಚೆಗೆ ನೇಮಕ ಆದವರು, ರಜೆ ಮೇಲೆ ಬಳ್ಳಾರಿಯ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಅಪಘಾತದಲ್ಲಿ ಯಾರದು ತಪ್ಪುಎಂದು ತನಿಖೆ ತಿಳಿಯಬೇಕಿದೆ. ಈ ಘಟನೆ ದುರದೃಷ್ಟಕರ ಮೃತರು ರಜೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಯಾವ ರೀತಿ ನೆರವು ನೀಡಬಹುದು ಎಂಬ ಬಗ್ಗೆ ಚರ್ಚಿಸಿ ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದರು.
ಸ್ಥಳಕ್ಕೆ ಐಜಿಪಿ ಲಾಭೂರಾಮ್, ಡಿಐಜಿಪಿ ಕೆ.ಪರಶುರಾಮ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

