ಚಂದ್ರವಳ್ಳಿ ನ್ಯೂಸ್, ಮಂಡ್ಯ:
ನಗರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಸ್ವರಾಷ್ಟ್ರ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಲೇಖಕ ಸುಧಾಕರ್ ಹೊಸಹಳ್ಳಿ ಅವರ “ನಾನು ಕಾಫಿರ್ – ಬಾಬಾಸಾಹೇಬರ ಹಿಂದೂತ್ವ ಕಥನ” ಕೃತಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕಿ ಸಹನಾ ವಿಜಯಕುಮಾರ್ ಅವರು, ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡುವಾಗ ಇಂದಿನ ಚಳುವಳಿ ಹಾಗೂ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಮೂಲ ಕೃತಿಯ ಆಶಯವನ್ನು ತಿರುಚುವ ಪ್ರವೃತ್ತಿ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು. ಅನುವಾದಗಳು ಮೂಲ ಕೃತಿಯ ಯಥಾರ್ಥತೆಯನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಕೃತಿ ಪರಿಚಯಿಸಿ ಮಾತನಾಡಿದ ಲೇಖಕ ಸುಧಾಕರ್ ಹೊಸಹಳ್ಳಿ ಅವರು, ಅಂಬೇಡ್ಕರ್ ಅವರನ್ನು ಚಳುವಳಿಗಳ ಮುಖವಾಣಿಯಾಗಿ ಬಳಸಿಕೊಳ್ಳುವ ಸಂದರ್ಭದಲ್ಲಿ ಅವರ ಭಾರತೀಯತೆಯ ಅಂಶವನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು. ತಮ್ಮ ಕೃತಿಯನ್ನು ಇಸ್ಲಾಂ ಧರ್ಮ ಮತ್ತು ಅಂಬೇಡ್ಕರ್, ಹಿಂದೂತ್ವದ ವಿಮರ್ಶೆ ಮತ್ತು ಶ್ಲಾಘನೆ, ಹಾಗೂ ಅಂಬೇಡ್ಕರ್ ಮತ್ತು ಭಾರತೀಯತೆ ಎಂಬ ಮೂರು ಭಾಗಗಳಲ್ಲಿ ವಿಂಗಡಿಸಿದ್ದು, ಬಾಬಾಸಾಹೇಬರನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ ಎಂದರು.
ಅಂಬೇಡ್ಕರ್ ಅವರ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರ ಬರಹಗಳ ಜೊತೆಗೆ ಸಂದರ್ಶನಗಳನ್ನು ಸಹ ಗಮನಿಸಬೇಕು. 1955ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಹಾತ್ಮ ಗಾಂಧಿ ಕುರಿತು ಹೇಳಿದ ವಿಚಾರಗಳನ್ನು ನಾವು ಗಮನಿಸಬೇಕಿದೆ ಎಂದು ಹೇಳಿದರು.
ವರ್ಣ ವ್ಯವಸ್ಥೆ ಕೆಲಸದ ಆಧಾರದ ಮೇಲೆ ರೂಪುಗೊಂಡಿದ್ದು, ನಂತರ ಜಾತಿ ವ್ಯವಸ್ಥೆಯ ಕೆಟ್ಟ ರೂಪಕ್ಕೆ ತಿರುಗಿತು. ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳು ಸಮಾಜದಲ್ಲಿ ನೆಲೆಗೊಂಡವು ಎಂದು ಅವರು ತಿಳಿಸಿದರು. ಹಿಂದೂ ಧರ್ಮದಂತೆ ಬೌದ್ಧ ಧರ್ಮವೂ ಶ್ರೀಲಂಕಾ, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಮೂಲ ಆಶಯದಿಂದ ದೂರ ಸರಿದಿದೆ. ಬುದ್ಧ ವಿರೋಧಿಸಿದ್ದ ಕೆಲವು ಆಚರಣೆಗಳನ್ನು ಅನುಯಾಯಿಗಳು ಅನುಸರಿಸಿರುವ ಉದಾಹರಣೆಗಳಿವೆ ಎಂದು ಅಭಿಪ್ರಾಯಪಟ್ಟರು.
ಹಿಂದೂತ್ವಕ್ಕೂ ಬಾಬಾಸಾಹೇಬರಿಗೂ ಆಂತರಿಕ ಸಂಬಂಧವಿದ್ದು, ಅವರ ಪುಸ್ತಕಗಳನ್ನು ಓದಿದರೆ ಹಿಂದೂತ್ವದ ಬಗ್ಗೆ ಅವರು ಹೊಂದಿದ್ದ ಮಮತೆ ಅರಿವಾಗುತ್ತದೆ ಎಂದರು. ಸೇವೆಯ ಮೂಲಕ ರಾಷ್ಟ್ರ ನಿರ್ಮಿಸಿದವರ ನಡುವೆ ಅಕ್ಷರಗಳನ್ನು ಮಾರಾಟ ಮಾಡುವ ದಲ್ಲಾಳಿಗಳೂ ಇದ್ದಾರೆ ಎಂದು ಟೀಕಿಸಿದರು. ಕೆಲ ಸಾಹಿತ್ಯಕಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನೇ ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಭಾರತವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಸಹೋದರತ್ವ ಮತ್ತು ಸೌಹಾರ್ದತೆಯ ಮೌಲ್ಯಗಳಿಂದಲೇ ದೇಶದ ಏಕತೆ ಉಳಿದಿದೆ ಎಂದು ಹೇಳಿದರು. ಇತಿಹಾಸದಲ್ಲಿ ನಮ್ಮ ಆಂತರಿಕ ಕಲಹಗಳಿಂದ ಪರಕೀಯರು ಆಳುವ ಪರಿಸ್ಥಿತಿ ಉಂಟಾಯಿತು. ಹೋರಾಟಗಾರರ ತ್ಯಾಗದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಜಗತ್ತಿನ ಯಾವುದೇ ಧರ್ಮವೂ ಮತ್ತೊಂದು ಧರ್ಮಕ್ಕೆ ತೊಂದರೆ ನೀಡುವುದನ್ನು ಬೋಧಿಸಿಲ್ಲ. ಎಲ್ಲ ಧರ್ಮಗಳೂ ಸಹಬಾಳ್ವೆಯನ್ನು ಸಾರುತ್ತವೆ. ಬಾಬಾಸಾಹೇಬರು ನೀಡಿದ ವಿಶ್ವದ ಅತ್ಯುತ್ತಮ ಸಂವಿಧಾನವನ್ನು ಗೌರವಿಸಿ ಅದರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್ಎಸ್ಎಸ್ ಮುಖಂಡ ಮಾ. ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು. ಮೀಸಲಾತಿ ವ್ಯವಸ್ಥೆಯ ಮೂಲಕ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದರು. ಸಮಾಜದಲ್ಲಿ ಜಾತೀಯತೆ ನಿರ್ಮೂಲನೆಯಾಗಿ ಸಾಮರಸ್ಯ ನೆಲೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಅನುಪಮಾ, ದಿವ್ಯ, ಅಭಿಜಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

