ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ನಮ್ಮ ಸ್ಲೋಗನ್ ಅಲ್ಲ, ಇದು ಕನ್ನಡಿಗರ ಭಾವನೆ. ಇದು ಜೆಡಿಎಸ್ ಪಕ್ಷದ ದನಿಯಲ್ಲ, ಅದು ಬೆಲೆ ಏರಿಕೆಯಿಂದ ಬಸವಳಿದಿರುವ ಸಾಮಾನ್ಯ ಕನ್ನಡಿಗನ ದನಿ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಲೆ ಏರಿಕೆ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾಕಪ್ಪ ಸಾಕು ಈ ಕಾಂಗ್ರೆಸ್ ಸರ್ಕಾರ ಅನ್ನೋ ಭಾವನೆ ಜನರ ಮನಸಿನಲ್ಲಿ ಬಂದಿದೆ. ಜನ ವಿರೋಧಿ ಸರ್ಕಾರ ಬಡ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ಸಿನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ. ಈ ಹೋರಾಟಕ್ಕೆ ನಮ್ಮ ಜತೆ ಕೈ ಜೋಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸೋಣ. ಭ್ರಷ್ಟ ಕಾಂಗ್ರೆಸ್ ನೀತಿಯನ್ನು ಖಂಡಿಸೋಣ ಎಂದು ಅವರು ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ ವಿಧಾನಸೌಧ ಚಲೋ ಚಳವಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ, ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಅಂತಾ ಪುಂಗಿದ್ದ ಸರ್ಕಾರ ಇವಾಗ ಕಾಣೆ ಆಗಿದೆ. 48 ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರ ವಿರುದ್ದ ಜೆಡಿಎಸ್ ಬೃಹತ್ ಹೋರಾಟ ಮಾಡಲಿದೆ. ಯಾವುದೇ ವರ್ಗವನ್ನ ಬೆಲೆ ಏರಿಕೆ ಬಿಟ್ಟಿಲ್ಲ. ಜನರು ಜೀವನ ಮಾಡೋಕೆ ಆಗುತ್ತಿಲ್ಲ ಎಂದು ನಿಖಿಲ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಗತ್ಯ ದಿನ ಬಳಕೆಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇತ್ತೀಚೆಗಂತೂ ಸರಣಿ ಬೆಲೆ ಏರಿಕೆಗಳಾಗಿವೆ. ವಿದ್ಯುತ್, ಡೀಸೆಲ್, ಹಾಲಿನ ದರ, ರಾಜ್ಯದಲ್ಲಿರುವ ಟೋಲ್ ಗಳ ದರ ಹೆಚ್ಚಳ ಮಾಡಲಾಯಿತು. ಕಸ ಸಂಗ್ರಹಣೆ ಮೇಲೂ ತೆರಿಗೆ ಹಾಕಲಾಯಿತು. ನಮ್ಮ ಮೆಟ್ರೋ ದರ, ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ದರ ಏರಿಕೆ, ನೀರಿನ ದರ ಏರಿಕೆ ಹೀಗೆ.. ಒಂದೇ ಎರಡೇ, ಜನರಿಗೆ ದಶದಿಕ್ಕುಗಳಿಂದಲೂ ಬೆಲೆಯೇರಿಕೆಯ ಬರೆಗಳು ಬೀಳುತ್ತಲೇ ಇವೆ ಎಂದು ನಿಖಿಲ್ ಕಿಡಿ ಕಾರಿದ್ದಾರೆ.