ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಯ ಆವರಣದಲ್ಲಿ ಬೃಹತ್ ಮರಗಳನ್ನು ಕಡಿಸಿರುವ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸೊಗಸಾಗಿ ಬೆಳದಿದ್ದ ಅಶೋಕ ಮರದ ದಿಮ್ಮಿಗಳನ್ನು ಬಿಟ್ಟು ದೊಡ್ಡ ದೊಡ್ಡ ರೆಂಬೆ-ಕೊಂಬೆಗಳನ್ನೂ ಸೇರಿದಂತೆ ಮರದಲ್ಲಿ ಒಂದು ಎಲೆಯನ್ನು ಬಿಡದೆ ಕಡಿದು ಹಾಕಲಾಗಿದ್ದು ಪರಿಸರ ಪ್ರೇಮಿಗಳ ಕೆಂಗ್ಗಣ್ಣಿಗೆ ಗುರಿಯಾಗಿದ್ದಾರೆ.
ಎರಡನೇ ಶನಿವಾರದ ರಜಾ ದಿನವಾದ ನಿನ್ನೆ ಮರಗಳನ್ನು ಕಡಿದಿದ್ದು ಇಂದು ಬೆಳಿಗ್ಗೆ ಕಡಿದ ಮರಗಳನ್ನು ಟ್ರಾಕ್ಟರ್ಗೆ ತುಂಬಿ ಸಾಗಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮುನಿರಾಜು, ಕೆಂಪು ಇರುವೆಗಳ ಕಾಟ ಹೆಚ್ಚಾಗಿತ್ತು. ಬೃಹತ್ತಾಗಿ ಬೆಳೆದು ನಿಂತಿದ್ದ ಮರಗಳು ಪಕ್ಕದಲ್ಲಿನ ಕಟ್ಟಡಕ್ಕೂ ತೊಂದರೆ ಉಂಟು ಮಾಡುತ್ತಿದ್ದವು. ಇರುವೆಗಳಿಂದ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿತ್ತು. ಹಾಗಾಗಿ ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ. ಅದು ಮತ್ತೆ ಬೆಳೆಯುತ್ತದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಸಾರಥ್ಯದ ತಾಲೂಕು ಅಧ್ಯಕ್ಷ ವಿನಯ್ ಕುಮಾರ್ ಹಾಗೂ ನಗರಾಧ್ಯಕ್ಷ ಶಿವಾನಂದ ಮಾತನಾಡಿ ಬೇಸಿಗೆ ಕಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮರಗಳ ಮಾರಣ ಹೋಮ ಮಾಡುವುದು ತರವಲ್ಲ, ಮರ ಕಡಿಯಲು ಅರಣ್ಯ ಇಲಾಖೆ ವತಿಯಿಂದ ಒಪ್ಪಿಗೆ ಪಡೆದಿದ್ದಾರಾ.. ಏನೋ ಗೊತ್ತಿಲ್ಲ.
ಹಾಗೆ ನೋಡಿದರೆ ಇರುವೆ ಕಾಟಕ್ಕೆ ನಗರದಲ್ಲಿರುವ ಉದ್ಯಾನವನಗಳ ಮರಗಳನ್ನೂ ಕಡಿಯಬೇಕಾಗುತ್ತೆ, ಇರುವೆಗಳನ್ನು ತಡೆಗಟ್ಟಲು ಬೇರೆ ಮಾರ್ಗ ಇದೆ. ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕಿದ್ದ ಸರ್ಕಾರಿ ಅಧಿಕಾರಿಗಳೆ ಮರಗಳ ಮಾರಣ ಹೋಮಕ್ಕೆ ಮುಂದಾಗಿದ್ದು ಸಹಿಸಲು ಅಸಾಧ್ಯ ಎಂದು ಆಕ್ರೋಶ ಹೊರ ಹಾಕಿದರು.
ತಾಲ್ಲೂಕು ಪಂಚಾಯತಿ ಒಳಗಿರುವ ಹೆಗ್ಗಣಗಳನ್ನು ಹೊರ ಹಾಕುವುದನ್ನು ಬಿಟ್ಟು ಹೊರಗಿನ ಮರಗಳನ್ನು ಇರುವೆ ಕಾಟದ ಕುಂಟು ನೆಪ ಹೇಳಿ ಕಟಾವು ಮಾಡಿರುವ ಘಟನೆಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.