ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ತುಘಲಕ್ ದರ್ಬಾರ್‘ ನಿಲ್ಲುವ ಯಾವ ಲಕ್ಷಣವೂ ಇಲ್ಲದಂತಾಗಿರುವುದು ರಾಜ್ಯದ ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದರು.
ಒಂದೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ‘ಖಜಾನೆ ಖಾಲಿ‘ ಎಂದು ಸಾಧ್ಯವಿರುವ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿರುವ ಈ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ತನ್ನ 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಸ್ಥಾನಮಾನಕ್ಕೆ ಆದೇಶಿಸಿ, ಕಾಂಗ್ರೆಸ್ ಮುಖಂಡರಿಗೂ ‘ಸಚಿವ ಸ್ಥಾನಮಾನ‘ದ ಭಾಗ್ಯ ಕರುಣಿಸಿದೆ. ಸಮಾಜವಾದದ ಮುಖವಾಡ ಧರಿಸಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಇದಕ್ಕೆ ಉತ್ತರಿಸಬೇಕು ಆಗ್ರಹ ಮಾಡಿದರು.
ತಮ್ಮ ಅಸಮರ್ಥ ಆಡಳಿತದಿಂದಾಗಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬರೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಮುಖಂಡರ ಸೌಕರ್ಯ, ಸವಲತ್ತು ಹೆಚ್ಚಳಕ್ಕೆ ಬಳಸುವುದು ಯಾವ ಸೀಮೆ ನ್ಯಾಯ?
ವಿಪರ್ಯಾಸವೆಂದರೆ, ಗ್ಯಾರಂಟಿಗಳ ಈಡೇರಿಕೆ ಹೆಸರಿನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಹಿಂದುಳಿದ ಸಮುದಾಯಗಳಿಗೆ, ಅಭಿವೃದ್ಧಿ ನಿಗಮ, ಮಂಡಳಿಗಳಿಂದ ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯವನ್ನೂ ಕಲ್ಪಿಸಲಿಲ್ಲ. ಅನುದಾನ ಕಡಿತ ಮಾಡಿ, ಇದ್ದ ಅಲ್ಪ-ಸ್ವಲ್ಪ ಕಲ್ಯಾಣ ಕಾರ್ಯಗಳಿಗೂ ಕಲ್ಲು ಹಾಕಿದ್ದು ಸಾಲದು ಎಂಬಂತೆ, ಈಗ ತನ್ನ ಪಕ್ಷದ ಮುಖಂಡರಿಗೆ ಸಚಿವ ಸ್ಥಾನಮಾನ ನೀಡಿ, ಜನರ ತೆರಿಗೆ ಹಣದಲ್ಲಿ ಮೆರೆಯಲು ಅನುಕೂಲ ಮಾಡಿಕೊಟ್ಟಿದೆ.
ಶೂನ್ಯ ಅಭಿವೃದ್ಧಿ, ಅಧಿಕಾರಕ್ಕಾಗಿ ಕುರ್ಚಿ ಕಿತ್ತಾಟ, ಕಾನೂನು ಸುವ್ಯವಸ್ಥೆಯ ವೈಫಲ್ಯ ಹಾಗೂ ದಿವಾಳಿಯಾಗಿರುವ ಅರ್ಥವ್ಯವಸ್ಥೆಯಿಂದಾಗಿ ಕರ್ನಾಟಕವನ್ನು ಅಂಧಕಾರಕ್ಕೆ ತಳ್ಳಿರುವ ಈ ಕಾಂಗ್ರೆಸ್ ಸರ್ಕಾರ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಕೇವಲ ತಮ್ಮ ಅಧಿಕಾರದಾಹಕ್ಕಾಗಿ, ಈಗ ನಿಗಮ-ಮಂಡಳಿಗಳಿಗೆ ಕ್ಯಾಬಿನೆಟ್ ದರ್ಜೆ ನೀಡಿ, ಸರ್ಕಾರಿ ಬೊಕ್ಕಸವನ್ನು ಲೂಟಿ ಮಾಡುತ್ತಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ‘ತುಘಲಕ್ ಆಡಳಿತ‘ಕ್ಕೆ ರಾಜ್ಯದ ಜನತೆಯೇ ಅತಿ ಶೀಘ್ರದಲ್ಲೇ ಅಂತ್ಯ ಹಾಡಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದರು.

