ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ಆಯಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾದ 32 ಹೊಸ ಕ್ರಸ್ಟ್ ಗೇಟ್ಗಳ ಅಳವಡಿಕೆ ಕಾರ್ಯವು ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಾಯವುಲ ಕೇಶವ ತಿಳಿಸಿದ್ದಾರೆ.
ಮಂಗಳವಾರ ಹೊಸಪೇಟೆ ಸಮೀಪದ ಅಣೆಕಟ್ಟೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
50 ವರ್ಷಗಳ ಸುದೀರ್ಘ ಬಾಳಿಕೆ: ಹೊಸ ಗೇಟ್ಗಳ ಅಳವಡಿಕೆಯಿಂದಾಗಿ ಜಲಾಶಯದ ಆಯಸ್ಸು ಕನಿಷ್ಠ 50 ವರ್ಷಗಳ ಕಾಲ ಹೆಚ್ಚಾಗಲಿದ್ದು, ಅಣೆಕಟ್ಟು ಮತ್ತಷ್ಟು ಭದ್ರವಾಗಲಿದೆ.
ತಜ್ಞರ ಸಲಹೆ ಮೇರೆಗೆ ಕ್ರಮ: ಈ ಹಿಂದೆ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಜಲಾಶಯ ಸುರಕ್ಷತಾ ಪ್ರಾಧಿಕಾರದ ತಜ್ಞರ ಸೂಚನೆಯಂತೆ ಎಲ್ಲ ಹಳೆಯ ಗೇಟ್ಗಳನ್ನು ತೆಗೆದು ಹೊಸದನ್ನು ಅಳವಡಿಸಲಾಗುತ್ತಿದೆ.
ರೈತರಿಗೆ ಆಶಾಕಿರಣ: ಮುಂಬರುವ ಮುಂಗಾರು ಮಳೆ ಚುರುಕಾಗುವ ಮುನ್ಸೂಚನೆ ಇರುವುದರಿಂದ, ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸಿ ರೈತರ ಹಿತರಕ್ಷಣೆ ಮಾಡುವುದು ಸರ್ಕಾರದ ಗುರಿಯಾಗಿದೆ.
”ಟಿಬಿ ಡ್ಯಾಂಗೆ ಸಂಬಂಧಿಸಿದ ಮೂರೂ ರಾಜ್ಯಗಳು (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ) ಈಗಾಗಲೇ ತಮ್ಮ ಪಾಲಿನ ಅನುದಾನವನ್ನು ಒದಗಿಸಿವೆ. ಅಗತ್ಯ ಬಿದ್ದರೆ ಆಂಧ್ರ ಸರ್ಕಾರ ಹೆಚ್ಚಿನ ಧನಸಹಾಯ ನೀಡಲು ಸಿದ್ಧವಿದೆ.”
ಪಾಯವುಲ ಕೇಶವ, ಹಣಕಾಸು ಸಚಿವ, ಆಂಧ್ರಪ್ರದೇಶ
ತಾಂತ್ರಿಕ ಸ್ವಾಯತ್ತತೆ:
ಅನುದಾನ ವಿನಿಯೋಗ ಮತ್ತು ತಾಂತ್ರಿಕ ನಿರ್ಧಾರಗಳಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಈ ಸಂಪೂರ್ಣ ಜವಾಬ್ದಾರಿಯನ್ನು ತುಂಗಭದ್ರಾ ಮಂಡಳಿ ನಿರ್ವಹಿಸುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಆಂಧ್ರ ಸರ್ಕಾರದ ಮುಖ್ಯ ಸಚೇತಕ ಕಲವಾ ಶ್ರೀನಿವಾಸಲು, ಟಿಬಿ ಮಂಡಳಿ ಕಾರ್ಯದರ್ಶಿ ಓ.ಆರ್.ಕೆರೆಡ್ಡಿ ಹಾಗೂ ಹಿರಿಯ ಅಭಿಯಂತರರು ಉಪಸ್ಥಿತರಿದ್ದರು.

