ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ತುಂಗಭದ್ರಾ ಜಲಾಶಯ ವ್ಯಾಪ್ತಿಯ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಭತ್ತ ಬೆಳೆಯುವ ರೈತರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ಜತೆಗೆ ಸಲಹೆ ನೀಡಿದ್ದಾರೆ.
ರೈತರು ಈಗಾಗಲೇ ಸುಗ್ಗಿ ಬೆಳೆ ತೆಗೆದುಕೊಂಡಿದ್ದು, ಇದೀಗ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಭತ್ತ ನಾಟಿ ಮಾಡಿದ್ದರೆ ಏನು ಸಮಸ್ಯೆ ಇಲ್ಲ. ಈಗ ಪ್ರಸ್ತುತ ಭತ್ತ ನಾಟಿ ಮಾಡುವವರಿಗೆ ನೀರಿನ ಕೊರತೆ ಎದುರಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ರೈತರು ಈಗ ಭತ್ತ ನಾಟಿ ಮಾಡಬಾರದು, ಭತ್ತಕ್ಕೆ ನೀರಿನ ಕೊರತೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಸಲಹೆ ನೀಡಿದ್ದು ರೈತರಿಗೆ ತಲೆಬಿಸಿ ಉಂಟು ಮಾಡಿದೆ.
ಮಾರ್ಚ್ ಅಂತ್ಯದವರಿಗೆ ನೀರು:
ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದಿಂದ ಅನೇಕ ಗ್ರಾಮ, ನಗರಗಳಿಗೆ ನೀರು ಸರಬರಾಜು ಆಗುತ್ತದೆ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ವರ್ಷದಲ್ಲಿ ಎರಡು ಬೆಳೆ ಬೆಳೆಯುತ್ತಿದ್ದಾರೆ. ಜಲಾಶಯದಿಂದ ಎರಡು ಬೆಳೆಗೆ ನೀರು ಹರಿಸಲಾಗುತ್ತಿತ್ತು. ಹಾಗೆಯೇ ಈಗಾಗಲೇ ಅನೇಕ ರೈತರು ಎರಡನೇ ಬೆಳೆಯಾಗಿ ಭತ್ತ ನಾಟಿ ಮಾಡಿದ್ದು, ಅವರ ಜಮೀನಿಗೆ ನೀರು ಹರಿಸಲಾಗುತ್ತಿದೆ. ಆದರೆ ಇದೀಗ ಇನ್ನು ಕೆಲ ರೈತರು ಭತ್ತದ ನಾಟಿ ಮಾಡುತ್ತಿದ್ದು, ಅಂತಹವರಿಗೆ ಸಮಸ್ಯೆ ಎದುರಾಗಲಿದೆ. ಏಕೆಂದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರೈತರ ಬೆಳೆಗೆ ಮಾರ್ಚ್ ಅಂತ್ಯದವರಗೆ ಮಾತ್ರ ನೀರು ಬಿಡಲಾಗುತ್ತದೆ. ಆ ನಂತರ ನೀರು ಬಿಡಲ್ಲ ಅಂತ ಅಧಿಕಾರಿಗಳು ಎಚ್ಚರಿಸಿ ಸೂಚನೆ ನೀಡಿದ್ದಾರೆ.
ಈಗಾಗಲೇ ಭತ್ತ ನಾಟಿದ ಫಸಲು ಮಾರ್ಚ್ ಅಂತ್ಯದ ವೇಳೆ ಬರಲಿದೆ. ಆದರೆ ಈಗ ಭತ್ತ ನಾಟಿ ಮಾಡಿದ ಬೆಳೆಗೆ ನೀರು ಏಪ್ರಿಲ್ ಅಂತ್ಯದವರೆಗೆ ಬೇಕಾಗಲಿದೆ. ಭತ್ತ ಬಿಟ್ಟು ಅಲ್ಪಾವಧಿ ಬೆಳೆ ಬೆಳೆಯುವಂತೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜನವರಿ 1 ರಿಂದ ಮಾರ್ಚ್ 31 ರವರಗೆ ಎರಡನೇ ಬೆಳೆಗೆ ನೀರನ್ನು ಹಂಚಿಕೆ ಮಾಡಲಾಗಿದೆ. ಎಡದಂಡೆ ಕಾಲುವೆಗೆ ಪ್ರತಿ ದಿನ 3800 ಕ್ಯೂಸೆಕ್ ನೀರನ್ನು ನಿತ್ಯ ಹರಿಸಲಾಗುತ್ತಿದೆ. ಏಪ್ರಿಲ್ 1 ರಿಂದ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಜಲಾಶಯ ನೀರು ಮೀಸಲಾಗಿರುತ್ತದೆ.
ಸದ್ಯ ಜಲಾಶಯದಲ್ಲಿ 53 ಟಿಎಂಸಿ ನೀರು- ಸಂಗ್ರಹವಿದ್ದು, ಜಲಾಶಯಕ್ಕೆ ಯಾವುದೇ ಒಳಹರಿವು ಇಲ್ಲ. ಎಲ್ಲ ಕಾಲುವೆ, ಆಂಧ್ರದ ಕೋಟಾ ಬಿಟ್ಟು ಏಪ್ರಿಲ್ ನಂತರ ಜಲಾಶಯದಲ್ಲಿ ಅಂದಾಜು 8 -10 ಟಿಎಂಸಿ ನೀರು ಉಳಿಯುವ ಸಾಧ್ಯತೆಯಿದೆ. ಇದರಲ್ಲಿ ಡೆಡ್ ಸ್ಟೋರೇಜ್ ತೆಗೆದು ಆರೇಳು ಟಿಎಂಸಿ ನೀರು ಮಾತ್ರ ಉಳಿಯುತ್ತದೆ.
ಅದನ್ನು ಕಡ್ಡಾಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಏಪ್ರಿಲ್ 1 ರಿಂದ ರೈತರ ಬೆಳೆಗಳಿಗೆ ನೀರು ಬಿಡುವುದಿಲ್ಲ. ಇದೀಗ ನಾಟಿ ಮಾಡಿದ್ರೆ, ಏಪ್ರಿಲ್ ಅಂತ್ಯದವರಗೆ ನೀರು ಬೇಕಾಗುತ್ತದೆ. ಅಲ್ಲಿವರಗೆ ನೀರು ಬಿಡಲು ಆಗುವುದಿಲ್ಲ. ಇದನ್ನು ರೈತರು ಅರ್ಥ ಮಾಡಿಕೊಂಡು, ಭತ್ತದ ಬದಲಾಗಿ, ಅಲ್ಪಾವಧಿ ಬೆಳೆಗಳನ್ನು ಬೆಳೆಯಬಹುದು ಎಂದು ಟಿಬಿ ಡ್ಯಾಂನ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟ ಸಂದೇಶ ನೀಡಿದ್ದಾರೆ.