ಚಂದ್ರವಳ್ಳಿ ನ್ಯೂಸ್, ತಿಪಟೂರು:
ತುಮಕೂರಿನಲ್ಲಿ ಕಾರ್ಯನಿರತ ದಲಿತ ಪತ್ರಕರ್ತನ ಮೇಲೆ ಕಿಡಿಗೇಡಿ ಮಂಜುನಾಥ್ ತಾಳಮಕ್ಕಿ ಹಲ್ಲೇ ನಡೆಸಿದ್ದು, ದಲಿತವಿರೋಧಿ ಕೋಮುವಾದಿ ಪತ್ರಕರ್ತನ ಮೇಲೆ ಗುಂಡಾಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಿಪಟೂರು ಉಪ ವಿಭಾಗ ಅಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಉಪ ವಿಭಾಗ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಿ ಒತ್ತಾಯಿಸಲಾಯಿತು.
ತಹಸೀಲ್ದಾರ್ ಪವನ್ ಕುಮಾರ್ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಮಾತನಾಡಿ ತುಮಕೂರಿನಲ್ಲಿ ಜೀ ಟಿ.ವಿ ವರದಿಗಾರನ ಮೇಲೆ ಪಬ್ಲಿಕ್ ಟಿ.ವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿರುತ್ತಾನೆ. ಕೋಮುವಾದಿ, ಕೊಳಕು ಜಾತಿಮನಸ್ಥಿತಿಯ ವ್ಯಕ್ತಿಯಾಗಿದ್ದು, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದು, ಜಾತಿ ಧರ್ಮಗಳ ಮಧ್ಯೆ ಕೋಮು ವೈಷಮ್ಯ ಬಿತ್ತಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರವಾರ ತಾಳಮಕ್ಕಿ ಮೂಲದ ಈ ವ್ಯಕ್ತಿ ಹಿಂದೆ ಮಂಗಳೂರು, ಕಾರವಾರ ಭಾಗಗಳಲ್ಲಿ, ಕೋಮುವಾದಿ ಸಂಘಟನೆಗಳಲ್ಲಿ ಕೆಲಸ ಮಾಡುತ್ತಾ, ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪಬ್ಲಿಕ್ ಟಿ.ವಿ ಮಾಧ್ಯಮವನ್ನು ಕೇವಲ ನೆಪಮಾತ್ರಕ್ಕೆ ಇಟ್ಟುಕೊಂಡಿದ್ದನು, ಮಂಜುನಾಥ್ ನಾಯ್ಕ ವರದಿಗಾರನಾಗಿ ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರೂ ದಲಿತ ವರದಿಗಾರರ ಮೇಲೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೇ ನಡೆಸಿರುವ ಪ್ರಕರಣ ಸಹ ದಾಖಲಾಗಿರುತ್ತದೆ. ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಸರ್ಕಾರ ಗುಂಡಾಕಾಯ್ದೆ ದಾಖಲಿಸಿ ಆರೋಪಿತ ವ್ಯಕ್ತಿಯ ವಿರುದ್ಧ ಪೂರ್ವಾಪರ ತನಿಖೆ ನಡೆಸಬೇಕು. ಮಾಧ್ಯಮ ಕ್ಷೇತ್ರಕ್ಕೆ ಮಾರಕವಾಗಿರುವ ಈತ ಇಡೀ ಸಮಾಜಕ್ಕೆ ಅಪಾಯಕಾರಿ. ಪಬ್ಲಿಕ್ ಟಿವಿ ಸಮಾಜದ ಮುಖವಾಣಿಯಂತೆ ಕೆಲಸ ಮಾಡುತ್ತಿದೆ.
ಆದರೆ ಇಂತಹ ಪೂರ್ವಾಗ್ರಹ ಪೀಡಿತ ಜಾತಿವಾದಿ ಮನಸ್ಥಿತಿಯ ವ್ಯಕ್ತಿಗಳು ಕೆಲಸ ಮಾಡಿದರೆ, ಮಾಧ್ಯಮ ಸಂಸ್ಥೆಗೂ ಕೆಟ್ಟ ಹೆಸರು ಬರುತ್ತದೆ. ಪಬ್ಲಿಕ್ ಟಿವಿ ರಂಗನಾಥ್ ರವರು ಕೂಡಲೇ ಈ ವ್ಯಕ್ತಿಯನ್ನು ವಜಾಗೊಳಿಸಬೇಕು. ಪೊಲೀಸ್ ಹಾಗೂ ಸರ್ಕಾರ ಕೂಡಲೇ ಕಾನೂನು ಕ್ರಮಕೈಗೊಂಡು ಇಂತಹ ಸಮಾಜದ್ರೋಹಿಗಳನ್ನ ನಿಗ್ರಹಿಸದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ, ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಕೆ ಕುಮಾರ್, ಜಕ್ಕನಹಳ್ಳಿ ಮೋಹನ್, ಮುಖಂಡರಾದ ಹರೀಶ್, ಯಗಚೀಕಟ್ಟೆ ಸತೀಶ್, ಮಾರನಗೆರೆ ಇರ್ಫಾನ್, ಮಹಿಳಾ ಸಂಚಾಲಕಿ ಕವಿತಾ ಮಹೇಶ್, ಸೀಮಾ, ಮತ್ತಿಘಟ್ಟ ಶಿಮಕುಮಾರ್, ಕಿರಣ್ ರಾಜ್ ಅರ್ಚೆನಹಳ್ಳಿ, ಡಿ.ಆರ್ ಬಸವರಾಜು, ಕಾರ್ಮಿಕ ಹೊನ್ನಪ್ಪ, ಗ್ಯಾರಘಟ್ಟಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್, ಕೊಪ್ಪ ಆನಂದ್ ಕುಮಾರ್, ಬಸವರಾಜು, ಗಾಂಧಿನಗರ ರಮೇಶ್ ಮಾರನಗೆರೆ, ವೆಂಕಟೇಶ್, ಮೈಲಾರಪ್ಪ ಮುಂತಾದವರು ಉಪಸ್ಥಿತರಿದರು.