ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಜಂಬೂದ್ವೀಪ ಕರ್ನಾಟಕ ಚಿತ್ರದುರ್ಗ ಸಹಯೋಗದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಚಿತ್ರದುರ್ಗದ ಸರಸ್ವತಿಪುರಂ ಮೊದಲಕ್ರಾಸ್, ಮಹಿಳಾ ಹಾಸ್ಟೆಲ್ ಮುಂಭಾಗದ ರಮಾಬಾಯಿ ಅಂಬೇಡ್ಕರ್ ಸರ್ಕಲ್ ಗೆ ಹೂವಿನ ಹಾರ ಹಾಕಿ ಉದ್ಘಾಟಿಸಲಾಯಿತು.
ವಕೀಲರಾದ ವಿಶ್ವಾನಂದ್ ಅವರು ಬೌದ್ಧ ಧಮ್ಮದ ತ್ರಿಸರಣಗಳನ್ನು ಹೇಳಿದರು. ಶಿಕ್ಷಕ ಸಿದ್ದೇಶ್ ಮಾತಾಡಿ ಅಂಬೇಡ್ಕರ್ ಏಳಿಗೆಗೆ ರಮಾಬಾಯಿ ಅವರ ಕೊಡುಗೆ ಅಪಾರವಾಗಿದ್ದು. ಅಂಬೇಡ್ಕರ್ ಅನುಪಸ್ಥಿತಿಯಲ್ಲಿ ಅನಕ್ಷರಸ್ಥೆಯೊಬ್ಬರು ಜಗತ್ತಿನ ಶ್ರೇಷ್ಠ ವ್ಯಕ್ತಿತ್ವವನ್ನು ರೂಪುಗೊಳಿಸಿದ್ದು ಅಲ್ಲದೇ, ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಅನುಭವಿಸುವ ಹಕ್ಕುಗಳಿಗೆ ಪರೋಕ್ಷವಾಗಿ ರಮಾಬಾಯಿ ಕಾರಣವಾಗಿದ್ದಾರೆ ಎಂದು ತಿಳಿಸಿದರು. ಪ್ರಾಧ್ಯಾಪಕ ಸಂಜೀವ ಕುಮಾರ್ ಪೋತೆ ಮಾತನಾಡಿ ಬಾಬಾಸಾಹೇಬರ ಅಪಾರ ಜ್ಞಾನದ ಸಂಪಾದನೆಗೆ ಮಾತಾ ರಮಾಬಾಯಿ ಆಧಾರವಾಗಿದ್ದರು.
ಸಮಾಜದಲ್ಲಿನ ಬಡತನ ಮತ್ತು ಶೋಷಣೆಗಳ ಕುರಿತು ಚಿಂತಿಸುತ್ತಿದ್ದರು. ಅಂಬೇಡ್ಕರ್ ಶಿಕ್ಷಣಕ್ಕಾಗಿ ಉಪವಾಸ ಮತ್ತು ಕಷ್ಟದ ದಿನಗಳನ್ನು ಅನುಭವಿಸಿದರು. ರಮಾಬಾಯಿಯವರು ಧಾರವಾಡಕ್ಕೆ ಆಗಮಿಸಿ ಅಲ್ಲಿನ ದಲಿತರ ಸ್ಥಿತಿಕಂಡು ತಮ್ಮ ಬಂಗಾರದ ಬಳೆಗಳನ್ನು ಮಾರಿ ಶಾಲೆ ಮತ್ತು ಹಾಸ್ಟೆಲನ್ನು ಸ್ಥಾಪಿಸಿದರು. ಧಾರವಾಡದಲ್ಲಿ ಮೂರು ವರ್ಷಗಳ ಕಾಲ ನೆಲೆಸಿ ಶಿಕ್ಷಣದ ಅಗತ್ಯವನ್ನು ತಿಳಿಸಿದ್ದಲ್ಲದೇ, ಮುಂದೆ ಧಾರವಾಡದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಿಕ್ಕೆ ಕಾರಣರಾದರು ಎಂದರು.
ಜಂಬೂದ್ವೀಪ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಸುರೇಶ್ ಕನಕಣ್ಣನವರ್ ಅಂಬೇಡ್ಕರ್ ಚಿಂತನೆಗಳು ಪ್ರಾಯೋಗಿಕವಾಗಿ ಜಾರಿಯಾಗಬೇಕು. ಎಸ್.ಇ.ಪಿ/ಟಿ.ಎಸ್.ಪಿ. ಅನುದಾನ ಬಳಸಿಕೊಳ್ಳಬೇಕಿದೆ. ಯುವಕರು A I , ಕೃಷಿ, ಪಶುಪಾಲನೆ ಉದ್ಯಮದಲ್ಲಿ ತೊಡಗಿಕೊಳ್ಳುವುದು ಈ ಕಾಲಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು. ಜಂಬೂದ್ವೀಪದ ರಾಜ್ಯ ಕಾರ್ಯದರ್ಶಿ ರಾಮಕೃಷ್ಣ ಬೂದಿಹಾಳು ಜಂಬೂದ್ವೀಪ ಎಲ್ಲಾ ಸಮುದಾಯಗಳ ಏಳಿಗೆಗೆ ಸ್ಥಾಪಿಸಿದ್ದು, ತಳಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರದ ಅನುದಾನದ ಮಾಹಿತಿ ಒದಗಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಂಬೂದ್ವೀಪದ ಜಿಲ್ಲಾಧ್ಯಕ್ಷರಾದ ಬಾಲೇನಹಳ್ಳಿ ರಾಮಣ್ಣ, ಚಿಂತಕ ಶ್ರೀನಿವಾಸರಾಜು, ವಕೀಲರಾದ ವಿಶ್ವಾನಂದ ವದ್ದೀಕೆರೆ, ಹನುಮಂತಪ್ಪ ದಡಗೂರು, ಪ್ರಕಾಶ ಯಾದಲಗಟ್ಟೆ, ವೇದಾಂತ ಏಳಂಜಿ, ರಮೇಶ್ ಕ್ಯಾಸಪುರ, ಪ್ರಾಧ್ಯಾಪಕ ಮಂಜುನಾಥ್ ಶ್ರೀನಿವಾಸ್, ಭೀಮರಾಜು, ಪ್ರದೀಪ್, ಕುಮಾರ್ ಕಸವನಹಳ್ಳಿ, ಶಿಕ್ಷಕರಾದ ರಾಮಚಂದ್ರಪ್ಪ, ಪಾತಪ್ಪ, ಹನುಮಂತಪ್ಪ ಮುಂತಾದವರಿದ್ದರು.

