ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 57.11ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 62.69ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 82.66ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 68.88ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 78.58ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 86.18ರಷ್ಟು ಫಲಿತಾಂಶ ಪ್ರಕಟವಾಗಿದೆ.

ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಬಾಲಕಿಯರದ್ದೇ ಮೇಲುಗೈ-ಪ್ರತಿವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 77.88ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದರು. ಈ ಪೈಕಿ  1,99,227 ಬಾಲಕರು ಉತ್ತೀರ್ಣರಾಗಿದ್ದಾರೆ.

2 ಮತ್ತು 3ನೇ ಪರೀಕ್ಷೆಗೆ ಶುಲ್ಕ ಇಲ್ಲ: ಈ ಸಲ ಎರಡನೇ ಪರೀಕ್ಷೆ ಮತ್ತು 3ನೇ ಪರೀಕ್ಷೆಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ ಇದು ಎಂದು ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸ್ಪೆಶಲ್ ಕ್ಲಾಸ್ ಮಾಡಲು ಮಾಹಿತಿ ಕೊಟ್ಟಿದ್ದೇವೆ. ಯಾರು ತೇರ್ಗಡೆ ಹೊಂದಿಲ್ಲವೋ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ. ಮುಖ್ಯ ಮಂತ್ರಿಗಳು ಕೂಡ ಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಬಂಗಾರಪ್ಪ ಹೇಳಿದ್ದಾರೆ.

ಪಿಯುಸಿ ಫಲಿತಾಂಶ ಪ್ರಕಟ-
ಬೆಂಗಳೂರು ದಕ್ಷಿಣ ಶೇ
85.36, ಬೆಂಗಳೂರು ಉತ್ತರ ಶೇ 83.31 ಫಲಿತಾಂಶ ದಾಖಲಿಸಿವೆ. ಉತ್ತರ ಕನ್ನಡ ಜಿಲ್ಲೆ 82.93ರಷ್ಟು ಫಲಿತಾಂಶ ದಾಖಲಿಸಿದ್ದರೆ, ಕೊಡಗು ಜಿಲ್ಲೆ 83.84ರಷ್ಟು ಫಲಿತಾಂಶ ಗಳಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಯಾರಿಗೆ ರಾಂಕ್?: ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು‌ವಿದ್ಯಾರ್ಥಿನಿ ದೀಪಶ್ರೀ ಮೊದಲ ರಾಂಕ್ ಗಳಿಸಿದ್ದಾರೆ. ಇವರು 600 ಕ್ಕೆ ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ 600 ಕ್ಕೆ ಅಂಕ ಗಳಿಸಿ ಮೊದಲ ರಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ. ಈಕೆ ದಕ್ಷಿಣ ಕನ್ನಡದ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

 

ಉಡುಪಿ ಜಿಲ್ಲೆ ಪ್ರಥಮ: ಉಡುಪಿ ಜಿಲ್ಲೆ ಶೇ 93.90 ಫಲಿತಾಂಶ ಗಳಿಸಿದ್ದು, ಮೊದಲ ಸ್ಥಾನ ಪಡೆದಿದೆ. ಯಾದಗಿರಿ ಶೇ 48.45 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.

 

 

 

Share This Article
error: Content is protected !!
";