ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಉತ್ತರ ಭಾರತದ ವಿವಿಧ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಪ್ರವಾಸ ಕೈಗೊಂಡಿರುವ ತುರುವೇಕೆರೆ ತಾಲೂಕಿನ ರೈತ ತಂಡಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ದೆಹಲಿಯ ನಿವಾಸದಲ್ಲಿ ಆತ್ಮೀಯ ಆತಿಥ್ಯ ನೀಡಿದರು.
ತುರುವೇಕೆರೆ ತಾಲೂಕಿನ ಸುಮಾರು 50ಕ್ಕೂ ಹೆಚ್ಚು ರೈತರು ಶನಿವಾರ ಸಚಿವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೈತರನ್ನು ಪ್ರೀತಿಯಿಂದ ಬರಮಾಡಿಕೊಂಡ ಕುಮಾರಸ್ವಾಮಿ ಅವರು, ಅವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿ ಸತ್ಕರಿಸಿದರು.
ಕೃಷಿ ಬದುಕಿನ ಬಗ್ಗೆ ಚರ್ಚೆ:
ಈ ಭೇಟಿಯ ವೇಳೆ ರೈತರು ತಮ್ಮ ಕೃಷಿ ಚಟುವಟಿಕೆಗಳು, ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಹಾಗೂ ಹಳ್ಳಿಗಳ ಸ್ಥಿತಿಗತಿಗಳ ಬಗ್ಗೆ ಸಚಿವರೊಂದಿಗೆ ಮುಕ್ತವಾಗಿ ಚರ್ಚಿಸಿದರು. ಉತ್ತರ ಭಾರತದ ಪ್ರವಾಸದ ಅನುಭವಗಳನ್ನು ಹಿರಿಯರು ಮತ್ತು ಮಹಿಳಾ ರೈತರು ಸಚಿವರೊಂದಿಗೆ ಹಂಚಿಕೊಂಡರು.
ಸಚಿವರ ಭಾವುಕ ನುಡಿ:
ರೈತರ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವರು, “ನನ್ನ ನಿವಾಸಕ್ಕೆ ಆಗಮಿಸಿದ ತುರುವೇಕೆರೆ ತಾಲೂಕಿನ ರೈತ ಬಂಧುಗಳ ಅಭಿಮಾನ ಮತ್ತು ವಾತ್ಸಲ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ಅವರ ಕೃಷಿ ಬದುಕಿನ ಹರಟೆ ಮತ್ತು ಪ್ರವಾಸದ ಅನುಭವಗಳು ನನಗೆ ಸಂತಸ ತಂದಿವೆ,” ಎಂದು ತಿಳಿಸಿದ್ದಾರೆ.
ರೈತ ತಂಡದಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ದೆಹಲಿಯ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ ಬಳಿಕ ರೈತರು ಕುಮಾರಸ್ವಾಮಿ ಅವರ ಆತಿಥ್ಯ ಸ್ವೀಕರಿಸಿ ಮರಳಿದರು.

