ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಟ್ಲಾಂಟಿಕ್ ಮಹಾಸಾಗರವನ್ನ ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ನಮ್ಮ ಬೆಂಗಳೂರು ಮೂಲದ ಅನನ್ಯ ಪ್ರಸಾದ್ ಅವರ ಸಾಧನೆ ಇಡೀ ದೇಶ ಹೆಮ್ಮೆಪಡುವಂತದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಾಧನೆಯ ಶಿಖರವನ್ನೇರಿದ ಯುವತಿ ಕನ್ನಡದ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಎನ್ನುವುದು ಇನ್ನಷ್ಟು ಖುಷಿಯ ವಿಷಯ ಎಂದು ಅವರು ತಿಳಿಸಿದ್ದಾರೆ.
ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ – ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್ಗೆ ಅಭಿನಂದನೆಗಳು. ಇಂತಹ ನಿಸ್ವಾರ್ಥ ಆಲೋಚನೆಗಳು ನಿಮ್ಮನ್ನು ಜೀವನದಲ್ಲಿ ಮತ್ತಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
ಅನನ್ಯ ಪ್ರಸಾದ್ ಯಾರು?
ಬೆಂಗಳೂರಿನ ಮೂಲದವರಾದ ಅನನ್ಯ ಪ್ರಸಾದ್ ಇಂಗ್ಲೆಂಡ್ನ ಶೆಫಿಲ್ಡ್ನಲ್ಲಿ ನೆಲೆಸಿದ್ದಾರೆ. ಇವರು ಕವಿ ಜಿಎಸ್ ಶಿವರುದ್ರಪ್ಪ ಅವರ ಪುತ್ರ ಶಿವಪ್ರಸಾದ್ ಅವರ ಪುತ್ರಿ.
ಅನನ್ಯ ಪ್ರಸಾದ್ ಅವರು ಅಟ್ಲಾಂಟಿಕ್ ಮಹಾಸಾಗರದಲ್ಲಿ ಏಕಾಂಗಿಯಾಗಿ ಐದು ಸಾವಿರ ಕಿಮೀ ದೂರುವನ್ನು ಹಾಯಿದೋಣಿ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.