ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಹೊರ ವಲಯದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮವು ನವೆಂಬರ್-16 ರಿಂದ ಜನವರಿ 13ರವರೆಗೆ ನೆರವೇರಲಿದ್ದು ಈ 60 ದಿನಗಳ ಕಾಲ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿದ ಸ್ವಾಮಿಗಳಿಗೆ ಪ್ರತಿನಿತ್ಯ ಉಚಿತ ಅನ್ನದಾನದ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಮಹತ್ವದ ಈ ಕಾರ್ಯಕ್ರಮದ ಉದ್ಘಾಟನೆ ನವೆಂಬರ್-16ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಗಣ ಹೋಮ ಶ್ರೀ ಚಂಡಿಕಾ ಹೋಮ ಪೂಜಾ ಕಾರ್ಯದೊಂದಿಗೆ ಆರಂಭವಾಗಲಿದೆ. ಮಧ್ಯಾಹ್ನ 12:45 ಗಂಟೆಗೆ ಪೂರ್ಣಾವತಿ ನಡೆಯುವುದು. ಹಾಗೂ ಅನ್ನದಾನದ ಕಾರ್ಯಕ್ರಮದ ಉದ್ಘಾಟನೆಯನ್ನು ವರ್ತಕ ಉದಯ ಶೆಟ್ಟಿ ಮಾಡಲಿದ್ದಾರೆ.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಸೆಂಬರ್-18ರಂದು ಬುಧುವಾರ ಸಂಜೆ ಏಳು ಗಂಟೆಗೆ 18 ಮೆಟ್ಟಿಲುಗಳ ಪಡಿಪೂಜ ಕಾರ್ಯಕ್ರಮ ಇರುವುದು. 22-12-2024 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾ ಅನ್ನದಾನ ಕಾರ್ಯಕ್ರಮವಿರುತ್ತದೆ.
13-01-2025 ಸೋಮವಾರ ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಆಭರಣ ಮೆರವಣಿಗೆ ನಗರದಲ್ಲಿ ನಡೆಯಲಿದೆ. ದಿನಾಂಕ 14.01.2025 ಮಂಗಳವಾರ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ಇರುತ್ತದೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಕಲ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ಹಾಗೂ ದೇವಸ್ಥಾನದ ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.