ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶ ಹಾಗೂ ನಾಡು ಕಂಡ ವೀರ ಮಹಿಳೆ ಒನಕೆ ಓಬವ್ವ ಆದರ್ಶಪ್ರಾಯ ವೀರವನಿತೆ. ಓಬವ್ವನವರ ಸ್ವಾಮಿನಿಷ್ಠೆ, ತ್ಯಾಗ, ಸಾಹಸ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾದ ಒನಕೆ ಓಬವ್ವ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ಹೈದರಾಲಿಯ ಸೈನಿಕರ ವಿರುದ್ದ ಹೋರಾಡಿ ಕೋಟೆ ರಕ್ಷಿಸಿದ ಓಬವ್ವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು. ಓಬವ್ವ ಸಾಮಾನ್ಯ ಹೆಣ್ಣು ಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೆ ಅಲ್ಲ, ಕನ್ನಡ ನಾಡಿಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಯುವ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ನಿರತವಾಗಿರುವುದು ಆಶಾದಾಯಕ ಬೆಳೆವಣಿಗೆಯಲ್ಲ. ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ಚಲನಚಿತ್ರ ನಟಿಯರಾದ ದಿವಂಗತ ಜಯಂತಿ ಅವರು ನಾಗರಹಾವು ಚಲನಚಿತ್ರದಲ್ಲಿ ಒನಕೆ ಓಬವ್ವ ಪಾತ್ರದಲ್ಲಿ ಬಹಳ ಪರಿಣಾಮಕಾರಿಯಾಗಿ ಓಬವ್ವರ ಧೈರ್ಯ, ಶಕ್ತಿ, ಸಾಹಸವನ್ನು ರಾಜ್ಯ ಹಾಗೂ ದೇಶಕ್ಕೆ ಚೆನ್ನಾಗಿ ಪರಿಚಯ ಮಾಡಿಕೊಟ್ಟಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ ಎಂದರು.
ರಾಜವೀರ ಮದಕರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಚಿತ್ರದುರ್ಗದ ಕೋಟೆಗೆ ಒದಗಿ ಬಂದ ಆಪತ್ತನ್ನು ಓರ್ವ ಸಾಮಾನ್ಯ ಮಹಿಳೆಯಾದ ಓಬವ್ವ ತನ್ನ ಮನೆಯಲ್ಲಿದ್ದ ಓನಕೆಯಿಂದ ಶತ್ರು ಸೈನ್ಯ ಸದೆಬಡಿದು ನಾಡಿನ ಕೋಟೆ ರಕ್ಷಿಸಿ, ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಓಬವ್ವ ಕರ್ನಾಟಕದ ಹೆಮ್ಮೆ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಸಾಕ್ಷಿ ಪ್ರಜ್ಞೆಯಧ್ಯೋತಕ ಒಬವ್ವ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಚಿತ್ರದುರ್ಗದ ಕಲ್ಲಿನಕೋಟೆಯ ಇತಿಹಾಸವನ್ನು ರಾಮಚಾರಿ, ನಾಗರಹಾವು ಕನ್ನಡ ಚಲನಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆದು, ಏಳು ಸುತ್ತಿನ ಕೋಟೆಯ ಒನಕೆ ಓಬವ್ವಳ ಇತಿಹಾಸವನ್ನು ಜಗದಗಲಕ್ಕೂ ಸಾರಿದೆ.
ಒನಕೆ ಓಬವ್ವ ಎಲ್ಲರಿಗೂ ಎಂದೆಂದಿಗೂ ಮಾದರಿಯಾಗಿದ್ದಾರೆ. ಅವಳ ಧೈರ್ಯ, ಸಾಹಸಗಳನ್ನು ಎಲ್ಲಾ ಹೆಣ್ಣುಮಕ್ಕಳು ಅಳವಡಿಸಿಕೊಳ್ಳಬೇಕು. ಅದೇ ರೀತಿ ಯುವ ಜನತೆ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸಿ ಸಮಾಜ ಸುಧಾರಣೆಯೆಡೆಗೆ ಶ್ರಮಿಸಬೇಕು ಎಂದರು.
ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್ನ ಬಸವ ನಾಗಿದೇವ ಸ್ವಾಮಿಜಿಯವರು ದಿವ್ಯಸಾನಿಧ್ಯವಹಿಸಿದ್ದರು. ಪ್ರೊ.ಡಿ.ಎಚ್.ನಟರಾಜ್ ಅವರು ಒನಕೆ ಓಬವ್ವಳ ಕುರಿತು ಉಪನ್ಯಾಸ ನೀಡಿದರು.
ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ: ಒನಕೆ ಓಬವ್ವ ಜಯಂತಿ ಅಂಗವಾಗಿ ನಗರದ ಐತಿಹಾಸಿಕ ಕೋಟೆ ಮುಂಭಾಗದಿಂದ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಗರದ ಕೋಟೆ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ಆನೆಬಾಗಿಲು, ಗಾಂಧಿವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತ, ಮದಕರಿ ವೃತ್ತದ ಮುಂಭಾಗದಿಂದ ವಾಲ್ಮೀಕಿ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ್, ತಹಶೀಲ್ದಾರ್ ಗೋವಿಂದರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗೆ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನ್ ಮೂರ್ತಿ, ಛಲವಾದಿ ಸಮುದಾಯದ ಮುಖಂಡರಾದ ಭಾರ್ಗವಿ ದ್ರಾವಿಡ್, ಶೇಷಪ್ಪ, ದಯಾನಂದ್, ಅಣ್ಣಪ್ಪಸ್ವಾಮಿ, ರವಿಕುಮಾರ್, ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.

