ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‘ಕ್ಲೇವ್ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರೇರಣೆ ನೀಡಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‘ಕ್ಲೇವ್ ಸಮಾವೇಶದಲ್ಲಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸ್ವಾಭಿಮಾನದ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಂದರ್ಭ ಬಂದಾಗಲೆಲ್ಲವೂ ಈ ಸಮಾಜದ ತೋರಿಸಿಕೊಟ್ಟಿದೆ.
ಎಷ್ಟೇ ಕಷ್ಟ-ನಷ್ಟಗಳಾದರೂ ದುಡಿದು ತಿನ್ನುತ್ತೇವೆ, ಅದೇ ಶರಣತತ್ವ, ಅದೇ ಕಾಯಕ ತತ್ವ ಎಂದು ನಂಬಿ ಬದುಕುತ್ತಿರುವ ಸಮಾಜ ಇಂದು ಕರುನಾಡು ಕಟ್ಟುವ ಮೂಲಕ ದೇಶದ ಏಳಿಗೆಗಾಗಿ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದೆ ಎಂದು ವಿಜಯೇಂದ್ರ ಹೇಳಿದರು.
ತ್ರಿವಿಧ ದಾಸೋಹದ ಫಲಾನುಭವಿಗಳಾಗಿರುವ ನಾವು ಬೆವರು ಸುರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಬೇಡುವ ಸಮಾಜವಲ್ಲ, ನೀಡುವ ಸಮಾಜ ಎಂದು ಹೆಮ್ಮೆಯಿಂದ ಎಲ್ಲರೂ ಗೌರವಿಸುವ ಸಮಾಜದ ಬಂಧುಗಳು ವಿಕಸಿತ ಭಾರತಕ್ಕಾಗಿ ಮಹತ್ವದ ಕೊಡುಗೆ ನೀಡಲು ಸಜ್ಜಾಗಬೇಕೆಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಪರಮಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸಿದ್ದರು. ಸಚಿವರಾದ ಎಂ.ಬಿ.ಪಾಟೀಲ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕರಾದ ನಿತೇಶ್ ಪಾಟೀಲ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ,

ಫೆಡರೇಶನ್ ಆಫ್ ಇಂಡಸ್ಟ್ರೀಸ್ ಆಫ್ ಇಂಡಿಯಾದ ಅಧ್ಯಕ್ಷರಾದ ಬಾಲಚಂದ್ರ ಸಿನ್ನ್ಹಾ ರಾವ್ ರಾಣೆ, ಆದರ್ಶ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ, ಶಾಸಕರಾದ ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕಾರ್ಯಕ್ರಮದ ಆಯೋಜಕ ಸಂತೋಷ್ ಕೆಂಚಾಂಬ, ಬಿ.ಎಸ್.ಪ್ರಶಾಂತ್ ಸೇರಿದಂತೆ ಪ್ರಮುಖರು, ಉದ್ಯಮಿಗಳು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

