ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕರ್ನಾಟಕದ ಹಲವು ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಕೇಂದ್ರದ ವಿವಿಧ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮುಂಗಾರು ಅಧಿವೇಶನ ಆರಂಭವಾದ ನಂತರ ಮತ್ತೊಮ್ಮೆ ದೆಹಲಿಗೆ ಬಂದು ವಿವಿಧ ಇಲಾಖೆಗಳ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸಂಪುಟ ಪುನರ್ ರಚನೆ ಸದ್ಯಕ್ಕೆ ಇಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬಂದಿಲ್ಲ. ಅಭಿವೃದ್ಧಿ ಯೋಜನೆಗಳ ಸಲುವಾಗಿ ಚರ್ಚಿಸಲು ನಾವು ಬಂದಿದ್ದೇವೆ. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೋರಿದ್ದೇನೆ. ಅವರು ಪಟ್ನಾಗೆ ಹೋಗಿದ್ದಾರೆಂದು ಡಿಕೆ ಶಿವಕುಮಾರ್ ತಿಳಿಸಿದರು.
ಮೈಸೂರು ದಸರಾದಲ್ಲಿ ಸಣ್ಣ ಏರ್ ಶೋ ಆಯೋಜನೆ ಮಾಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೋರಿಕೊಳ್ಳುತ್ತೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಕೇಂದ್ರ ಸಚಿವರ ಜತೆ ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕೇಂದ್ರ ಜಲಶಕ್ತಿ, ಪರಿಸರ ಹಾಗೂ ಅರಣ್ಯ ಸಚಿವರ ಜೊತೆ ಈಗಾಗಲೇ ಚರ್ಚಿಸಲಾಗಿದೆ. ಅರಣ್ಯ ಪ್ರದೇಶದ ಜಾಗ ಸ್ವಾಧೀನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸರ್ಕಾರ ತಕರಾರು ಹಾಕಿದೆ. ಗೋವಾ ತಕರಾರಿನ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೇಕೆದಾಟು ಯೋಜನೆ, ಕೃಷ್ಣ ನದಿ ನೀರು ವಿಚಾರವಾಗಿಯೂ ಚರ್ಚೆ ನಡೆದಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವರು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದರು.
ಅನುದಾನಕ್ಕೆ ಮನವಿ-
ಕೇಂದ್ರ ಸಚಿವರ ಬಳಿ ಎತ್ತಿನಹೊಳೆ ಯೋಜನೆಗೆ ಅನುದಾನ ನೀಡುವಂತೆ ಕೇಳಿದ್ದೇವೆ. ಇತರ ನೀರಾವರಿ ಯೋಜನೆಗಳಿಗೆ ನೀಡಬೇಕಿದ್ದ ಅನುದಾನಕ್ಕೆ ಮನವಿ ಮಾಡಿದ್ದೇವೆ. ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು, ಜಲಶಕ್ತಿ ಸಚಿವರನ್ನೂ ಭೇಟಿ ಮಾಡಿದ್ದೆ. ವಿ ಸೋಮಣ್ಣ ಕೂಡ ಜೊತೆಯಲ್ಲಿ ಇದ್ದರು. ನಂತರ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿದ್ದೇನೆ.
ಅರಣ್ಯ ಹಾಗೂ ಪರಿಸರ ಸಚಿವರ ಬಳಿ, ಎತ್ತಿನಹೊಳೆ ಯೋಜನೆಯ ಮಾಹಿತಿ ನೀಡಿದ್ದೇನೆ. ತುಮಕೂರು ಹಾಗೂ ಹಾಸನ ಭಾಗದಲ್ಲಿ ಕೆಲಸ ನಿಂತಿತ್ತು. ಕಂದಾಯ ಭೂಮಿ ನಮ್ಮದು ಎಂದು ಹೇಳಿದ್ದರು. ಅದಕ್ಕೆ ಪರ್ಯಾಯವಾಗಿ ಭೂಮಿ ನೀಡಲಾಗಿದೆ. ಹೀಗಾಗಿ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದೆವು. ಈಗ ಮತ್ತೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಕಳಸಾ, ಮಹದಾಯಿ ಯೋಜನೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ನಾವು ಟೆಂಡರ್ ಕರೆದಿದ್ದೇವೆ. ಆಂಧ್ರ ಮತ್ತು ಗೋವಾದವರು ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿಯಿತು. ಅವರು ಯಾರು ನಮ್ಮ ರಾಜ್ಯಕ್ಕೆ ನೋಟಿಸ್ ನೀಡಲು ನೀವು ಕೇಂದ್ರದವರಿಗೆ ಬೇಕಿದ್ದರೆ ಹೇಳಿ, ಹೇಗೆ ಎಲ್ಲಿ ಮಾಡಬೇಕು ಎಂಬುದಾಗಿ ಅದರಂತೆಯೇ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.