ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿಯ ಸುವರ್ಣಸೌಧದ ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯೆ ನಾಟಿಕೋಳಿ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಸುವರ್ಣಸೌಧದಲ್ಲಿ ಸೋಮವಾರ ಆರ್.ಅಶೋಕ್ ಅವರನ್ನು ನೋಡುತ್ತಿದ್ದ ಹಾಗೇ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಏನಾಯ್ಯ ಅಶೋಕ್ ಸಣ್ಣಾಗಿದ್ಯಾ? ಎಂದು ಪ್ರಶ್ನಿಸಿದರು. ಅದಕ್ಕೆ ಅಶೋಕ್, ಇಲ್ಲ ಸರ್ ನಿಮ್ಮ ತರಹ ನಾಟಿಕೋಳಿ ತಿನ್ನಲ್ಲ, ಬಿಟ್ಟುಬಿಟ್ಟಿದ್ದೇನೆ ಸರ್ ಎಂದು ಪ್ರತಿಕ್ರಿಯಿಸಿದರು.
ಅದಕ್ಕೆ ಸಿದ್ದರಾಮಯ್ಯ, ಏ ಅದೆಲ್ಲ ಬಿಡಬಾರದು ತಿನ್ನಬೇಕು ಕಣಯ್ಯ. ಹೇ, ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದು ಸಿಎಂ ನಗೆ ಚಟಾಕಿ ಹಾರಿಸಿ ಮಾತು ಮುಂದುವರಿಸಿದರು.
ಅವಿಶ್ವಾಸ ನಿಲುವಳಿ ಮಂಡಿಸ್ತೀರೇನಪ್ಪಾ?:
ಇದಕ್ಕೂ ಮುನ್ನ ಸ್ಪೀಕರ್ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಆರ್.ಅಶೋಕ್, ಸುನೀಲ್ ಕುಮಾರ್ ಮುಖಾಮುಖಿಯಾದರು.
ಸಿಎಂ ಬರುವ ಮುಂಚೆಯೇ ಸ್ಪೀಕರ್ ಭೇಟಿ ಮಾಡಿದ್ದ ಆರ್.ಅಶೋಕ್, ಸುನೀಲ್ ಕುಮಾರ್, ಸಿದ್ದರಾಮಯ್ಯರನ್ನು ಕೈಕುಲುಕಿ ವಿಶ್ ಮಾಡಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಆರ್.ಅಶೋಕ್ ಬಳಿ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಕೇಳಿದರು. ಇದಕ್ಕೆ ಏನೂ ಮಾತನಾಡದೇ ಸುನೀಲ್ ಕುಮಾರ್ ನಕ್ಕರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಕಾನೂನು ಸಲಹೆಗರರಾದ ಪೊನ್ನಣ್ಣ ಉಪಸ್ಥಿತರಿದ್ದರು.

