ಶಾಸಕರ ಮನೆಯನ್ನು ಸುಟ್ಟು ಧ್ವಂಸ ಮಾಡಿದ ರಕ್ಕಸರು ಯಾರು?
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ದಿನೇಶ್ ಗುಂಡೂರಾವ್ ಅವರೇ,
ಬೆಂಗಳೂರಿನ ಕೆಜೆ ಹಳ್ಳಿ-ಡಿಜೆ ಹಳ್ಳಿಯಲ್ಲಿ ದಾಂಧಲೆ ನಡೆಸಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಿಮ್ಮದೇ ಪಕ್ಷದ ಶಾಸಕರ ಮನೆಯನ್ನು ಸುಟ್ಟು ಧ್ವಂಸ ಮಾಡಿದ ರಕ್ಕಸರು ಯಾರು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ ದಾಂಧಲೆ ನಡೆಸಿದ ಕೋಮುವಾದಿ ದುಷ್ಟರು ಯಾರು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳ ಹಿಂದಿರುವ ದೇಶ ವಿದ್ವಾಂಸಕ ಶಕ್ತಿ ಯಾವುದು? ಇವರಿಗೆಲ್ಲ ನೆರವು ನೀಡುತ್ತಿರುವ ಮತಬ್ಯಾಂಕ್ ತೋಳ ವಾಗಿರುವ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷ ಎನ್ನುವುದು ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ, ಜಗತ್ತಿಗೇ ತಿಳಿದಿರುವ ನಗ್ನ ಸತ್ಯ.
ನಿಮ್ಮ ತಟ್ಟೆಯಲ್ಲಿ ಹೆಗ್ಗಣವನ್ನಿಟ್ಟುಕೊಂಡು ಇನ್ನೊಬ್ಬರ ಅಂಗಳದಲ್ಲಿ ನೊಣ ಹುಡುಕುವ ನಿಮ್ಮ ಮಾತುಗಳು ನಿಮ್ಮ ದ.ಕ.ಜಿಲ್ಲಾ ಉಸ್ತುವಾರಿ ಸಚಿವತನದ ವೈಫಲ್ಯದ ಹತಾಶೆಯ ಮಾತುಗಳಾಗಿವೆ. ಭಾರತೀಯ ಜನತಾ ಪಾರ್ಟಿ ನಿಮ್ಮ ಕಾಂಗ್ರೆಸ್ಸಿನ ರಾಷ್ಟ್ರವಿದ್ರೋಹಿ ಮನಸ್ಸಿನ ನಡವಳಿಕೆಯನ್ನು ಮೆಟ್ಟಿನಿಂತು ಮೇಲೇರಿ ಬಂದ ರಾಷ್ಟ್ರಭಕ್ತರ ರಾಜಕೀಯ ಪಕ್ಷ, ಈ ಕಾರಣಕ್ಕಾಗಿ ಇಂದು ವಿಶ್ವದಲ್ಲಿ ಭಾರತಕ್ಕೆ ಮುಂಚೂಣಿ ಜಾಗತಿಕ ಮನ್ನಣೆ ದೊರೆತಿದೆ, ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಬರುವಿಕೆಯನ್ನು ರತ್ನಗಂಬಳಿ ಹಾಸಿ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಾಗತಿಸುತ್ತಿವೆ, ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಇಂದು ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿದೆ.
ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಜಾತಿ-ಜಾತಿಗಳ ನಡುವೆ ಧರ್ಮ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಬಡವರನ್ನು ಬಡವರನ್ನಾಗಿಯೇ ಇರಿಸಿ, ದುಷ್ಟರನ್ನು ಪೋಷಿಸಿ, ರಾಷ್ಟ್ರ ವಿದ್ವಂಸಕ ಭಯೋತ್ಪಾದಕರಿಗೆ ನೀರೆರೆದು ಭಾರತವನ್ನು ನಲುಗುವಂತೆ ಮಾಡಿದ ‘ಮತ ಬಕಾಸುರ ಪಕ್ಷ’ ಯಾವುದಾದರೂ ಇದ್ದರೆ ಅದು ನಿಮ್ಮ ಕಾಂಗ್ರೆಸ್ ಪಕ್ಷ, ಇದರ ಅಡಿಯಲ್ಲಿ ನಿಮ್ಮಂತಹ ಅಧಿಕಾರ ದಾಹಿಗಳು ರಾಷ್ಟ್ರ ಹಿತ, ಜನಹಿತ, ನಾಡ ಹಿತವನ್ನು ಮರೆತು, ದುಷ್ಟ ಶಕ್ತಿಗಳನ್ನು ಫೋಷಿಸಿಕೊಂಡು ಅಧಿಕಾರ ಅನುಭವಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದೀರಿ, ಅತಿ ಶೀಘ್ರದಲ್ಲೇ ಕರ್ನಾಟಕ ರಾಜ್ಯದಲ್ಲಿ ಕಾಲವೇ ನಿಮಗೆ ಉತ್ತರ ನೀಡಲಿದೆ, ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಬಿ ವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.