ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಬಿಜೆಪಿಯವರು ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?. ಹಿಂದೆ ಬಳ್ಳಾರಿಯ ಪರಿಸ್ಥಿತಿ ವಿರುದ್ಧ ಅಂದು ನಾವು ಪಾದಯಾತ್ರೆ ಮಾಡಿರುವುದು ನಿರ್ದಿಷ್ಟ ಕಾರಣಕ್ಕೋಸ್ಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಳ್ಳಾರಿಯನ್ನು ರಿಪಬ್ಲಿಕ್ ಬಳ್ಳಾರಿ ಮಾಡುತ್ತಾರೆ, ಅಕ್ರಮ ಗಣಿಗಾರಿಕೆ ಮಾಡಲಾಗುತ್ತದೆ ಎಂದು ಆರೋಪಿಸಿ ಅಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ದೂರು ಕೊಟ್ಟಿದ್ದರು. ಈ ಬಗ್ಗೆ ನಾನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಬ್ರದರ್ಸ್, ಯಡಿಯೂರಪ್ಪ ಮೈಮೇಲೆ ಬಿದ್ದರು. ಅದಕ್ಕೋಸ್ಕರ ನಾವು ಅಂದು ಪಾದಯಾತ್ರೆ ಮಾಡಿದ್ದೆವು. ಇವರು ಯಾವ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ?. ಬ್ಯಾನರ್ ತೆಗೆದು ಹಾಕಿದವರು ಯಾರು?.
ಅದೇ ಪ್ರಚೋದನೆಯಲ್ಲವೇ?. ಬ್ಯಾನರ್ ತೆಗೆಯದೇ ಹೋದಲ್ಲಿ ಪ್ರಚೋದನೆ ಎಲ್ಲಾಗುತ್ತಿತ್ತು?. ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಬ್ಯಾನರ್ ಹಾಕಲಾಗಿತ್ತು. ಅದನ್ನು ತೆಗೆಯುವ ಅಗತ್ಯವೇನಿತ್ತು?. ಬಿಜೆಪಿಯವರು ಕಾಯುತ್ತಾ ಇದ್ದಾರೆ.
ಪ್ರಮುಖವಾಗಿ ಜನಾರ್ದನ ರೆಡ್ಡಿ, ಶ್ರೀರಾಮುಲು ಅಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಹೆಂಡತಿ ಸೋತಿದ್ದಾರೆ. ಅದಕ್ಕೋಸ್ಕರ ಅಸೂಯೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದ್ವೇಷ ಭಾಷಣ ಮಸೂದೆ ವಾಪಸ್ ಬಗ್ಗೆ ಬಿಜೆಪಿ ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ಮನವರಿಕೆ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, “ದ್ವೇಷ ಭಾಷಣದ ವಿರುದ್ಧದ ಮಸೂದೆ ಸರ್ವಾನುಮತದಿಂದ ಪಾಸ್ ಆದ ಬಿಲ್. ಇದನ್ನು ರಾಜ್ಯಪಾಲರು ಪರಿಷ್ಕರಣೆಯೂ ಮಾಡಿಲ್ಲ, ವಾಪಸ್ ಕಳುಹಿಸಿಯೂ ಇಲ್ಲ, ಸ್ವೀಕರಿಸಲೂ ಇಲ್ಲ. ರಾಜ್ಯಪಾಲರು ಯಾವಾಗ ಕರೆಯುತ್ತಾರೋ ಆಗ ಹೋಗಿ ವಿವರಿಸುತ್ತೇನೆ” ಎಂದರು.
ಸಂಕ್ರಾಂತಿ ಬಳಿಕ ಕುರ್ಚಿ ಕಿತ್ತಾಟ ಶುರುವಾಗುತ್ತದೆ ಎಂಬ ಬಿಜೆಪಿ ಟೀಕೆಯ ಕುರಿತು ಕೇಳಿದಾಗ, “ಕಾಳಗವೇ ಇಲ್ಲ. ನೀವೇ ಕಾಳಗ ಸೃಷ್ಟಿ ಮಾಡುವವರು. ಎಲ್ಲಿದೆ ಕಾಳಗ?. ನಾನು ಕೇಳುತ್ತಿದ್ದೇನೆ ಎಲ್ಲಿದೆ ಕಾಳಗ?” ಎಂದು ಹೇಳಿದರು.
ಬಳ್ಳಾರಿ ಗಲಾಟೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣವನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ಈಗಾಗಲೇ ತಿಳಿಸಿವೆ. ಘಟನೆ ಸಂಬಂಧ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಪ್ರತಿಪಕ್ಷಗಳು ಒತ್ತಡ ಹಾಕಿದ್ದವು.

