ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾರವ್ವ ನೀ
——————-
ನೀಲವ್ವ ಗಂಗವ್ವರ ಕೊರಳಾಗಿ
ಕಾಳವ್ವೆ ಅಕ್ಕ ಸಂಕವ್ವೆಯರಾದಿ
ಮಾಚಯ್ಯ ಗುಂಡಯ್ಯ ಚೆನ್ನ
ಚೆನ್ನಯ್ಯ ಅಲ್ಲಮನಾದಿ
ಶರಣರ ವಚನರ ಭಂಡಾರ
ಜ್ಞಾನದ ದಾರಿಯೋ
ಬೆಳಕಿಟ್ಟ ಬುದ್ಧಾವತಾರಿಯೋ
ಮನು ಪಂಥ ಜಾಡಿಸಿದ ಮಹಿಮ
ಸಂಗಮದ ಸಂತರೊಡಗೂಡಿ
ಕನ್ನಡಕ್ಕೊಂದು ಧರ್ಮ ದಿಕ್ಕಾದೆ
ಕಲ್ಯಾಣ ಕ್ರಾಂತಿ ಮೊಳಗಿಸಿ
ಏರಿಳಿತ ಸಮವೆಂದ ಕರೆಗೆ
ಬೆಚ್ಚಿದ ಬಿಜ್ಜಳ ಹೆಗಲು ಕಳಚಿ
ಕಣ್ಣಿದ್ದೂ ಸಹ ಕುರುಡನೆ
ನೀ ದಾಟಿದ ಬೇಲಿಯ
ಹತ್ತಿರ ಸುಳಿಯದ ಸ್ಥಾವರರು
ಜಂಗಮತೆಯ ಮಾತಿನ್ನೆಲ್ಲಿ
ಸಂಕ್ರಾಂತಿ ಮಡಿ ಹಿಡಿಸಿತಾದರೆ
ಮಹಾ ಚೈತ್ರ ಸುಳ್ಳಾಯಿತೇ
ಆನದೇವ ಹೊರಗಣನವ ಮೈಲಿಗೆಯೇ
ಕಟ್ಟಾಕಿ ಬಂಧಿಸಿಟ್ಟವರೇ
ಐಕ್ಯತೆಯ ಕಥೆ ಕಟ್ಟಿದವರು
ಅಗಲಿಕೆಗೆ ಸಿಡಿದ ಕೂಡಲಸಂಗಮ ಕುಲ
ಜಾತಿ ಮಠಗಳಿಗೆ ಮೀಸಲು
ನುಡಿ ಮುತ್ತುಗಳು ಹಾಡಾದವಷ್ಟೇ
ನಮ್ಮೊಳಗೆ ಓಡಾಡುತ್ತಿಲ್ಲ
ಸಾಕ್ಷಿ ಪ್ರಜ್ಞೆಯೋ ತೀರ್ಥ ಪತ್ರೆಯೋ
ಹೋರಾಟ ಹೆಜ್ಜೆಗಳು ಮಾಸದಿರಲಿ
ಸಹಮತವಿದೆ ಎಲ್ಲರವನಾಗು ಪುಣ್ಯಾತ್ಮ
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.