ವರ್ಷ ಕೊನೆಗೊಳ್ಳುವಾಗ ಉಳಿಯುವವರು ಯಾರು?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿ ಹೊಸ ವರ್ಷ ಬರುವಾಗ ನಾವು
ಈ ವರ್ಷ ಹೊಸದಾಗಿ ಏನು ಮಾಡಬೇಕು?” ಎಂದು ರೆಸೊಲ್ಯೂಷನ್ ತೆಗೆದುಕೊಳ್ಳುತ್ತೇವೆ. ಕೆಲವರು ಜಿಮ್ ಹೋಗೋಣ ಅಂತ ಹೇಳ್ತಾರೆ, ಕೆಲವರು ಹೊಸ ಕೆಲಸ, ಹೊಸ ಸಂಬಂಧ, ಹೊಸ ಕನಸುಗಳ ಪಟ್ಟಿ ಮಾಡ್ತಾರೆ. ಆದರೆ ಒಂದು ವರ್ಷ ಮುಗಿಯುವಾಗ, ಅಂದರೆ ಡಿಸೆಂಬರ್ ಕೊನೆಯ ದಿನಗಳಲ್ಲಿ, ನಾವು ಅಷ್ಟು ಗಂಭೀರವಾಗಿ ಒಂದು ಕೆಲಸ ಮಾಡಲ್ಲ. ಅದು ಏನು ಗೊತ್ತಾ? ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳುವುದು.

ಹೊಸ ವರ್ಷ ಶುರುವಾಗೋದು ಸಹಜ. ಆದರೆ ಒಂದು ವರ್ಷ ಮುಗಿಯುವುದು ಬದುಕಿನ ಪಾಠಗಳನ್ನು ಕೊಡುತ್ತದೆ. ಆ ಪಾಠಗಳನ್ನು ಕಲಿಯದೇ ಮುಂದಕ್ಕೆ ಹೋದರೆ, ಹೊಸ ವರ್ಷವೂ ಹಳೆಯ ತಪ್ಪುಗಳ ಪುನರಾವರ್ತನೆಯಾಗುತ್ತದೆ.

- Advertisement - 

ವರ್ಷ ಮುಗಿಯುವಾಗ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ: ಈ ಒಂದು ವರ್ಷದಲ್ಲಿ ನಾನು ಏನನ್ನೆಲ್ಲ ಮಾಡಿದ್ದೇನೆ?”

ಈ ಪ್ರಶ್ನೆ ಕೇಳೋದು ಸುಲಭವಲ್ಲ. ಯಾಕಂದ್ರೆ ಇದು ನಮ್ಮ ಸತ್ಯವನ್ನು ನಮ್ಮ ಮುಂದೆ ನಿಲ್ಲಿಸುತ್ತದೆ. ನಾವು ಮಾಡಿದ ಒಳ್ಳೆಯದು, ಮಾಡಿದ ತಪ್ಪು, ಮಾಡದೇ ಬಿಟ್ಟ ಅವಕಾಶಗಳು ಆಲ್ ಕ್ಲಿಯರ್ ಆಗಿ ನಮ್ಮ ಕಣ್ಣ ಮುಂದೆ ಬರುತ್ತವೆ. ಕೆಲವೊಮ್ಮೆ ಉತ್ತರ ಹೆಮ್ಮೆಯದಾಗಿರಬಹುದು, ಕೆಲವೊಮ್ಮೆ ನೋವಿನದಾಗಿರಬಹುದು. ಆದರೆ ಸತ್ಯ ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ.

- Advertisement - 

ಮುಂದಿನ ಪ್ರಶ್ನೆ ಇನ್ನೂ ಮಹತ್ವದ್ದು: ನಾನು ಯಾರಿಗೆ ಒಳ್ಳೆಯದು ಮಾಡಿದ್ದೇನೆ?” ಬದುಕು ಅಂದರೆ ಸ್ವಾರ್ಥ ಮಾತ್ರವಲ್ಲ. ನಾವು ಬದುಕಿರುವ ಸಮಾಜ, ನಮ್ಮ ಸುತ್ತಲಿನ ಜನ, ನಮ್ಮಿಂದ ಸ್ವಲ್ಪ ಸಹಾಯ, ಒಂದು ಮಾತು, ಒಂದು ಸಮಯ ನಿರೀಕ್ಷಿಸುತ್ತಾರೆ. ಈ ಒಂದು ವರ್ಷದಲ್ಲಿ ನಾವು ಯಾರಿಗಾದರೂ ನಿಜವಾದ ಒಳ್ಳೆಯದು ಮಾಡಿದ್ದೇವಾ? ಅದು ಹಣವಾಗಿರಬಹುದು, ಸಮಯವಾಗಿರಬಹುದು, ಬೆಂಬಲವಾಗಿರಬಹುದು ಅಥವಾ ಕೇವಲ ಒಂದು ಧೈರ್ಯದ ಮಾತಾಗಿರಬಹುದು. ಯಾರ ಜೀವನದಲ್ಲಿ ಆದರೂ ನಮ್ಮಿಂದ ಸ್ವಲ್ಪ ಬೆಳಕು ಬಿದ್ದಿದೆಯೇ ಎಂಬುದನ್ನು ಯೋಚಿಸಬೇಕು. ಅದಕ್ಕೆ ಜೊತೆಗೆ ನಾವು ಕೇಳಿಕೊಳ್ಳಬೇಕಾದ ಮತ್ತೊಂದು ಪ್ರಶ್ನೆ: ಯಾರು ನಮಗೆ ಒಳ್ಳೇದನ್ನ ಮಾಡಿದ್ದಾರೆ?”

ಇದು ಬಹಳ ಮುಖ್ಯ. ಯಾಕಂದ್ರೆ ನಾವು ಹೆಚ್ಚಿನ ಬಾರಿ ನಮ್ಮ ಮೇಲೆ ಅನ್ಯಾಯ ಮಾಡಿದವರನ್ನು ಮಾತ್ರ ನೆನಪಿಡುತ್ತೇವೆ. ಆದರೆ ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಿಂತವರು, ನಮ್ಮ ಮೇಲೆ ನಂಬಿಕೆ ಇಟ್ಟವರು, ನಮಗೆ ಧೈರ್ಯ ತುಂಬಿದವರು, ಅವರನ್ನು ಮರೆಯಬಾರದು. ಕೃತಜ್ಞತೆ ಅನ್ನೋದು ದೊಡ್ಡ ಗುಣ. ಒಳ್ಳೆಯದನ್ನು ಮರೆಯದ ಮನಸ್ಸು, ಮುಂದಿನ ಬದುಕಿನಲ್ಲಿ ಇನ್ನಷ್ಟು ಒಳ್ಳೆಯದನ್ನು ಸೆಳೆಯುತ್ತದೆ.
ವರ್ಷ ಮುಗಿಯುವಾಗ ನಾವು ನೋಡುವ ಮತ್ತೊಂದು ನಿಜ:
ವರ್ಷದ ಆರಂಭದಲ್ಲಿ ನನ್ನ ಜೊತೆಗೆ ಇದ್ದವರು, ವರ್ಷ ಕೊನೆಯಲ್ಲಿ ಇನ್ನೂ ನನ್ನ ಜೊತೆಗೆ ಇದ್ದಾರಾ?”

ಇದು ತುಂಬಾ ನೋವು ಕೊಡೋ ಪ್ರಶ್ನೆ. ಯಾಕಂದ್ರೆ ಜೀವನ ಅನ್ನೋದು ಫಿಲ್ಟರ್‌ನಂತೆ. ಸಮಯ ಕಳೆದಂತೆ, ಜನರು ನಿಧಾನವಾಗಿ ಬದಲಾಗುತ್ತಾರೆ. ಕೆಲವರು ನಮ್ಮ ಜೊತೆಗೆ ನಿಜವಾದ ಸ್ನೇಹಕ್ಕಾಗಿ ಇದ್ದವರು. ಕೆಲವರು ನಮ್ಮ ಅವಶ್ಯಕತೆಗಾಗಿ ಮಾತ್ರ ಇದ್ದವರು. ವರ್ಷ ಮುಗಿಯುವಷ್ಟರೊಳಗೆ ಯಾರು ಉಳಿದಿದ್ದಾರೆ ಅನ್ನೋದು, ಅವರ ನಿಷ್ಠೆಯ ಅಳತೆ.

ಇಲ್ಲಿ ನಾವು ಒಂದು ಸತ್ಯ ಒಪ್ಪಿಕೊಳ್ಳಬೇಕು: ಎಲ್ಲಾ ಜನರೂ ನಮ್ಮ ಜೊತೆ ಶಾಶ್ವತವಾಗಿ ಇರಲ್ಲ. ಕೆಲವರು ಪಾಠ ಕಲಿಸಲು ಬರುತ್ತಾರೆ, ಕೆಲವರು ಅನುಭವ ಕೊಡಲು ಬರುತ್ತಾರೆ, ಕೆಲವರು ಗಾಯ ಮಾಡಲು ಬರುತ್ತಾರೆ. ಆದರೆ ಎಲ್ಲರೂ ಉಳಿಯಲೇಬೇಕು ಅನ್ನೋ ನಿಯಮ ಇಲ್ಲ. ಇದನ್ನು ಒಪ್ಪಿಕೊಂಡಾಗಲೇ ಮನಸ್ಸು ಹಗುರವಾಗುತ್ತದೆ.

ಇನ್ನೊಂದು ಕಠಿಣ ಪ್ರಶ್ನೆ:
ಎಷ್ಟು ಜನ ನಮ್ಮನ್ನ ಉಪಯೋಗಿಸಿಕೊಂಡ್ರು?”
ಈ ಪ್ರಶ್ನೆಗೆ ಉತ್ತರ ಸಿಗೋದು ನೋವಿನಿಂದ. ಯಾಕಂದ್ರೆ ನಾವು ನಂಬಿದವರು
, ಸಹಾಯ ಮಾಡಿದವರು, ನಮ್ಮ ಸಮಯಭಾವನೆಸಾಧನಗಳನ್ನು ಬಳಸಿಕೊಂಡು, ತಮ್ಮ ಕೆಲಸ ಮುಗಿದ ಮೇಲೆ ದೂರವಾದವರನ್ನು ನೆನಪಿಸಿಕೊಳ್ಳಬೇಕು. ಆದರೆ ಇಲ್ಲಿ ನಾವು ಬುದ್ಧಿವಂತರಾಗಬೇಕು. ಅವರು ಉಪಯೋಗಿಸಿಕೊಂಡರು ಅನ್ನೋ ಕಾರಣಕ್ಕೆ ನಾವು ನಮ್ಮ ಒಳ್ಳೆಯತನವನ್ನು ಕಳೆದುಕೊಳ್ಳಬಾರದು. ಆದರೆ ಮುಂದೆ ಯಾರಿಗೆ ಎಷ್ಟು ಕೊಡಬೇಕು ಅನ್ನೋದನ್ನು ಕಲಿಯಬೇಕು.

ಒಂದು ವರ್ಷ ನಮಗೆ ಕಲಿಸುವ ದೊಡ್ಡ ಪಾಠ ಏನೆಂದರೆ: ನಮ್ಮ ಜೀವನದಲ್ಲಿ ಜನರ ಸಂಖ್ಯೆ ಮುಖ್ಯವಲ್ಲ, ಅವರ ನಿಜವಾದ ಸ್ಥಾನ ಮುಖ್ಯ.

ನಮ್ಮ ಸುತ್ತ ಸಾವಿರ ಜನ ಇರಬಹುದು, ಆದರೆ ಕಷ್ಟದ ಸಮಯದಲ್ಲಿ ಜೊತೆ ನಿಲ್ಲೋದು ಇಬ್ಬರು ಇದ್ದರೂ ಸಾಕು. ಅವರಿಗಾಗಿ ನಾವು ಬದುಕಿನಲ್ಲಿ ಯಾವತ್ತೂ ಸಮಯ ಮಾಡಬೇಕು.

ವರ್ಷ ಮುಗಿಯುವಾಗ ಇನ್ನೊಂದು ಪ್ರಶ್ನೆ ಕೇಳಿಕೊಳ್ಳಬೇಕು: ನಾನು ಈ ವರ್ಷ ಯಾವ ಮಟ್ಟಿಗೆ ಬದಲಾಗಿದೆ?”

ಬದಲಾವಣೆ ಅಂದರೆ ಹಣ, ಹುದ್ದೆ, ಹೆಸರು ಮಾತ್ರವಲ್ಲ. ಮನಸ್ಸಿನಲ್ಲಿ ಶಾಂತಿ ಬಂದಿದೆಯಾ? ಯೋಚನೆಗಳು ಪಕ್ವವಾಗಿದೆಯಾ? ಸಹನೆ ಹೆಚ್ಚಿದೆಯಾ? ಅಹಂಕಾರ ಕಡಿಮೆಯಾಗಿದೆನಾ? ಈ ಪ್ರಶ್ನೆಗಳ ಉತ್ತರವೇ ನಮ್ಮ ನಿಜವಾದ ಬೆಳವಣಿಗೆಯನ್ನು ತೋರಿಸುತ್ತದೆ.

ಪ್ರತಿ ವರ್ಷ ನಮಗೆ ಒಂದು ಕನ್ನಡಿಯಂತೆ. ಅದರಲ್ಲಿ ನಾವು ನಮ್ಮ ಮುಖ ಮಾತ್ರವಲ್ಲ, ನಮ್ಮ ಸ್ವಭಾವ, ನಮ್ಮ ಸಂಬಂಧಗಳು, ನಮ್ಮ ನಿರ್ಧಾರಗಳನ್ನು ನೋಡಬಹುದು. ಆ ಕನ್ನಡಿಯಲ್ಲಿ ಕಾಣುವ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಇರಬೇಕು.

ಹಾಗಾದ್ರೆ, ಹೊಸ ವರ್ಷಕ್ಕೆ ರೆಸೊಲ್ಯೂಷನ್ ತೆಗೆದುಕೊಳ್ಳಬೇಕಾ? ತೆಗೆದುಕೊಳ್ಳಬಹುದು. ಆದರೆ ಅದಕ್ಕಿಂತ ಮೊದಲು, ವರ್ಷ ಮುಗಿಯುವಾಗ ಸ್ವಪರಿಶೀಲನೆ ಮಾಡಿಕೊಳ್ಳುವುದು ಅತ್ಯಗತ್ಯ.

ಯಾಕಂದ್ರೆ:
ಸ್ವಪರಿಶೀಲನೆ ಇಲ್ಲದ ರೆಸೊಲ್ಯೂಷನ್ ದೀರ್ಘಕಾಲ ಇರಲ್ಲ. ಅನುಭವ ಕಲಿಯದ ಹೊಸ ವರ್ಷ
, ಹಳೆಯ ವರ್ಷದ ಪುನರಾವರ್ತನೆ ಮಾತ್ರ. ಜನರನ್ನು ಅರ್ಥಮಾಡಿಕೊಳ್ಳದ ಜೀವನ, ಮತ್ತೆ ಮತ್ತೆ ಮೋಸಕ್ಕೆ ಒಳಗಾಗುತ್ತದೆ.
ಆದರಿಂದ ಈ ವರ್ಷ ಮುಗಿಯುವಾಗ
, ಸ್ವಲ್ಪ ಸಮಯ ನಿಮ್ಮೊಂದಿಗೇ ಕಳೆಯಿರಿ. ಫೋನ್‌ಅನ್ನು ಬದಿಗಿಟ್ಟು, ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಮನಸ್ಸಿನೊಳಗೆ ಇಳಿಯಿರಿ. ನಿಮ್ಮನ್ನು ನೀವು ಪ್ರಶ್ನಿಸಿ. ಉತ್ತರಗಳು ನೋವಿನಾದರೂ ಸತ್ಯವಾಗಿರಲಿ.

ಏಕೆಂದರೆ, ನಮಗೆ ಸುಳ್ಳು ಹೇಳಬಾರದೆಂದು ನಾವು ಬಯಸುವ ಏಕೈಕ ವ್ಯಕ್ತಿ ನಮ್ಮದೇ ಆತ್ಮ. ವರ್ಷ ಮುಗಿಯಲಿ. ಆದರೆ ಪಾಠಗಳು ಉಳಿಯಲಿ. ನೋವು ಕಡಿಮೆಯಾಗಲಿ. ಜ್ಞಾನ ಹೆಚ್ಚಾಗಲಿ. ಸಂಬಂಧಗಳು ಶುದ್ಧವಾಗಲಿ. ಮತ್ತು ಮುಂದಿನ ವರ್ಷಕ್ಕೆ ನಾವು ಒಳ್ಳೆಯ ಮನುಷ್ಯರಾಗಿ, ಬುದ್ಧಿವಂತರಾಗಿ, ಪಕ್ವ ವ್ಯಕ್ತಿಗಳಾಗಿ ಕಾಲಿಡೋಣ.

ಅದೇ ನಿಜವಾದ ಹೊಸ ವರ್ಷದ ಶುಭಾರಂಭ. ಕೊನೆಯದಾಗಿ, ಎಲ್ಲರಿಗೂ ಹೊಸ ಆಶಯಗಳು, ಹೊಸ ಅರಿವು ಮತ್ತು ಉತ್ತಮ ಮಾನವೀಯತೆಯೊಂದಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಲೇಖನ-ಚಂದನ್ ಅವಂಟಿ, ಇಡ್ಲೂರ್
, ಯಾದಗಿರಿ.

Share This Article
error: Content is protected !!
";