ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರ ಗೌರವಧನ ನೆಪದಲ್ಲಿ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಅತ್ಯಾಪ್ತ ಕಾರ್ಯಕರ್ತರಿಗೆ ಒಟ್ಟು 18.75 ಕೋಟಿ ರೂಪಾಯಿ ‘ಉಡುಗೊರೆ‘ ಕೊಟ್ಟು ರಾಜ್ಯದ ಬೊಕ್ಕಸವನ್ನ ಲೂಟಿ ಮಾಡುತ್ತಿದೆ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಸರ್ಕಾರದ ಬೊಕ್ಕದ ಹಣವನ್ನ ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಗೌರವಧನ ಕೊಡಲು ಬಳಸುತ್ತಿದ್ದೀರಲ್ಲ, ಕನ್ನಡಿಗರ ತೆರಿಗೆ ಹಣ ಏನು ನಿಮ್ಮ ಕೆಪಿಸಿಸಿ ಆಸ್ತಿನಾ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಈ ಗ್ಯಾರೆಂಟಿ ಅನುಷ್ಠಾನ ಸಮಿತಿಗಳು ಯಾಕೆ ಬೇಕು? ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಆಯಾ ಇಲಾಖೆಯಲ್ಲಿ ಅಧಿಕಾರಿಗಳಿಲ್ಲವೇ, ಸರ್ಕಾರಿ ಸಿಬ್ಬಂದಿಗಳಿಲ್ಲವೇ? ಅಥವಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಂದರೆ ಕಾಂಗ್ರೆಸ್ ಕಾರ್ಯಕರ್ತರ ಉದ್ಯೋಗ ಖಾತ್ರಿಗಾಗಿ ರೂಪಿಸಿರುವ ನರೇಗಾ ಯೋಜನೆನಾ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕದ ಜನತೆಯ ಬೆವರಿನ ತೆರಿಗೆ ಹಣವನ್ನ ಈ ರೀತಿ ಪೋಲು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.