ಚಂದ್ರವಳ್ಳಿ ನ್ಯೂಸ್, ಹಿರಿಯೂರು
118 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ವಾಣಿ ವಿಲಾಸಗರ ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆ.ಆರ್.ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರ ಜಲಾಶಯವೇ ಪ್ರೇರಣೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿದಾನ ಅವರು, ತಮ್ಮ ಒಡವೆಗಳನ್ನು ಅಡವಿಟ್ಟು, ಈ ಭಾಗದ ಜನರ ಅಭ್ಯುದಯಕ್ಕಾಗಿ ಜಲಾಶಯ ನಿರ್ಮಿಸಿದರೆ, ನೀರು ಭರ್ತಿ ಮಾಡುವ ವಿಚಾರದಲ್ಲಿ ವಿಜೆಎನ್ಎಲ್ ಇಂಜಿನಿಯರ್ ಗಳು, ಇತರೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಇಂಜಿನಿಯರ್ (AE)ಗಳಾದ ಮಾನಸ ಜೆ.ಎಂ, ದಿವ್ಯಾ ಬಿ, ತಾಂತ್ರಿಕ ಸಹಾಯಕ(ಟಿಎ)ರಾದ ಉಷಾ, ಸುಮಾ, ಪ್ರಥಮ ದರ್ಜೆ ಸಹಾಯಕಿ ವಿಮಲಾ ಮತ್ತಿತರ ಮಹಿಳಾ ಅಧಿಕಾರಿಗಳು ತಮ್ಮ ಮನೆಯಲ್ಲಿ ಸ್ವಂತ ಕಾರ್ಯಕ್ರಮ ಇದೆ ಎನ್ನುವಂತೆ ಹೊಸ ಹೊಸ ಡ್ರೆಸ್ ಗಳನ್ನು ತೊಟ್ಟು ಅತ್ಯಂತ ಸಂಭ್ರಮ ಸಡಗರದಿಂದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅತಿ ಮುಖ್ಯವಾಗಿ ನಮ್ಮೂರಿನ ಡ್ಯಾಂ ವಾಣಿ ವಿಲಾಸ ಸಾಗರ ಜಲಾಶಯವು ಭರ್ತಿ ಆಗಲಿ ಎಂದು ಹಲವು ಸಲ ಇವರುಗಳು ಕಣಿವೆ ಮಾರಮ್ಮ ದೇವಿ ಅವರಲ್ಲಿ ಪ್ರಾರ್ಥಿಸಿದ್ದು ಉಂಟು.

ವಿವಿ ಸಾಗರ ಜಲಾಶಯಕ್ಕೆ ಭದ್ರಾ ಡ್ಯಾಂನಿಂದ ನೀರು ಪಂಪ್ ಮಾಡುವ ಸಂದರ್ಭದಲ್ಲಿ ಇವರ ಕಾರ್ಯ ಕೂಡ ಶ್ಲಾಘನೀಯವಾಗಿತ್ತು.

