ವಾಕ್ಸಮರ ಮುಂದುವರೆಸಿದ ಯತ್ನಾಳ್-ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ವರಿಷ್ಠರಿಂದ ಹೊರಬೀಳುತ್ತಿದ್ದಂತೆಯೇ ಬಸನಗೌಡ ಪಾಟೀಲ್ ಯತ್ನಾಳ್ ಬಣದಿಂದ ಒಂದೊಂದೇ ಅಸ್ತ್ರಗಳು ಆಚೆ ಬರುತ್ತಿವೆ.
ಪಕ್ಷದ ಅಧ್ಯಕ್ಷರ ಮೇಲೆ ಟೀಕಾಪ್ರಹಾರ ನಡೆಸುತ್ತಿದ್ದ ಯತ್ನಾಳ್ ವಿರುದ್ಧ ನೋಟಿಸ್ ನೀಡಲಾಗಿತ್ತು. ಸ್ವಲ್ಪ ದಿನ ಮೌನವಾಗಿದ್ದ ಯತ್ನಾಳ್ ಮತ್ತೆ ಈಗ ವಿಜಯೇಂದ್ರ ವಿರುದ್ಧ ವಾಕ್ಸಮರ ಮಾಡುತ್ತಿದ್ದಾರೆ.

ಇದಕ್ಕೆ ರಮೇಶ್ ಜಾರಕಿಹೊಳಿ ಸಹ ಸಾಥ್​ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟ ಅತಿರಕಕ್ಕೇರಿದೆ. ಜನವರಿ-19ರ ಭಾನುವಾರ ಸಹ ಯತ್ನಾಳ್, ರಮೇಶ್ ಜಾರಕಿಹೊಳಿ ಇಬ್ಬರು ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಸ್ವಪಕ್ಷೀಯರ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಇಟ್ಟ ಗುರಿ
, ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಇಬ್ಬರಿಗೂ ತಿರುಗೇಟು ನೀಡಿದ್ದಾರೆ. ಈ ಮೂಲಕ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಮ್ಮ ಮಾತಿನಿಂದ ನನ್ನ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

- Advertisement - 

ಯಡಿಯೂರಪ್ಪ ಜೈಲಿಗೆ ಹೋಗಿದ್ದು, ಹಾಳಾಗಿದ್ದು ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಎಂದು ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಅವರು ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ
, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಮುಂದುವರೆದು ಮಾತನಾಡಿದ ಯತ್ನಾಳ್ ಸದಾಕಾಲ ನಾನು ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಇವನಿಂದಲೇ ಪಾಪ ಸುನೀಲ್ ಕುಮಾರ್ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನರು ಹೀಗೇ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾಗ ಕೂಡ ನಾನು ಒಬ್ಬನೆ ಹೋಗಿದ್ದೆ. ನಾವು ಯಾರಿಗೂ ಹೆದರಲ್ಲ ಎಂದು ಯತ್ನಾಳ್ ಕಿಡಿಕಾರಿದರು.

- Advertisement - 

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಬಿಜೆಪಿ ಮಾಜಿ ಸಚಿವ ಕೆ ಶಿವನಗೌಡ ನಾಯಕ್ ಅಭಿಮಾನಿಗಳು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವಿಜಯೇಂದ್ರ, ನಾನು ರೈತ ನಾಯಕ ಯಡಿಯೂರಪ್ಪನ ಮಗನಾಗಿ ಹೇಳುತ್ತೇನೆ. ಶಿಕಾರಿಪುರ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗುರುಹಿರಿಯರ ಆಶಿರ್ವಾದದಿಂದ ಮುನ್ನಡೆಯುತ್ತೇನೆ. ಭಗವಂತನ ಕೃಪೆ, ಹರಗುರು ಚರಮೂರ್ತಿಗಳ ಆಶಿರ್ವಾದ ನನ್ನ ಮೇಲಿದೆ ಎಂದು ಅಬ್ಬರಿಸಿ ಎದುರಾಳಿಗಳಿಗೆ ಟಾಂಗ್ ನೀಡಿದರು.

ಮಾಜಿ ಸಚಿವ ಕೆ ಶಿವನಗೌಡ ಮಾತನಾಡಿ, ಭವಿಷ್ಯದಲ್ಲಿ ವಿಜಯೇಂದ್ರ ಸಿಎಂ ಆಗುತ್ತಾರೆ. ಬಿ.ವೈ ವಿಜಯೇಂದ್ರ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅಧಿಕಾರದ ಕತ್ತಿ ಹಿಡಿದು ಸರ್ಕಾರವನ್ನು ತರಬೇಕಿದೆ.

ನೀವು ಅಧಿಕಾರಕ್ಕೆ ಬಂದು ನಮಗೆ ನವಲಿ ಜಲಾಶಯ ಮಾಡಿ, ಹತ್ತಾರು ಕೆರೆಗಳನ್ನ ಮಾಡಿ ನೀರು ತುಂಬಿಸಬೇಕು. ಜಿಲ್ಲೆಯಲ್ಲಿ ಜನ ಏಮ್ಸ್ ಹೋರಾಟ ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ, ಜೆ.ಪಿ ನಡ್ಡಾ, ಅಮಿತ್ ಶಾ ಅವರ ಮನವೊಲಿಸಿ ಏಮ್ಸ್ ತರಬಹುದು. ಅದು ವಿಜಯೇಂದ್ರ ಅವರಿಂದ ಸಾಧ್ಯವಿದೆ ಎಂದು ಹೇಳಿದರು.

 

Share This Article
error: Content is protected !!
";