ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಹಿಳಾ ಪತಂಜಲಿ ಯೋಗ ಕೇಂದ್ರದ ಜಿಲ್ಲಾ ಪ್ರಭಾರಿ ಹಾಗೂ ಯೋಗ ಶಿಕ್ಷಕಿ ಹೇಮಾವತಿಯವರನ್ನು ಕೋಟೆ ಯೋಗ ಸಮಿತಿ ವತಿಯಿಂದ ಮಿನರ್ವ ಕಾನ್ವೆಂಟ್ನಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗ ಶಿಕ್ಷಕಿ ಹೇಮಾವತಿ ಯೋಗ, ಧ್ಯಾನ, ಪ್ರಾಣಾಯಾಮದಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.
ಮಹಿಳೆಯರನ್ನು ಕಾಡುವ ಅನೇಕ ಸಮಸ್ಯೆಗಳನ್ನು ಯೋಗದಿಂದ ದೂರ ಮಾಡಿಕೊಳ್ಳಬಹುದು. ಆಧುನಿಕ ಯುಗದಲ್ಲಿ ಎಲ್ಲರೂ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುವುದು ಸಹಜ. ಯೋಗಾಭ್ಯಾಸದಿಂದ ಮನಸ್ಸು ಪ್ರಶಾಂತವಾಗಿರುವುದಲ್ಲದೆ ಆಯಾಸವಾಗುವುದಿಲ್ಲ. ಲವಲವಿಕೆಯಿಂದಿರಲು ಯೋಗ ನೆರವಾಗಲಿದೆ ಎಂದು ತಿಳಿಸಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ಸರ್ವ ರೋಗಗಳ ನಿವಾರಣೆಗೆ ಯೋಗ ರಾಮ ಬಾಣವಿದ್ದಂತೆ. ಎಲ್ಲಾ ವಯಸ್ಸಿನವರು ಯೋಗದಲ್ಲಿ ತೊಡಗಿಕೊಳ್ಳುವುದರಿಂದ ನಾನಾ ರೀತಿಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಋಷಿಮುನಿಗಳ ಕಾಲದಿಂದಲೂ ಯೋಗಕ್ಕೆ ತನ್ನದೆ ಆದ ಮಹತ್ವವಿದೆ. ಯೋಗ ಮಾಡುವವರು ನಿರೋಗಿಗಳಾಗಿರುತ್ತಾರೆಂದರು.
ಮಿನರ್ವ ಕಾನ್ವೆಂಟ್ನ ಕಾರ್ಯದರ್ಶಿ ಶಾರದ, ರಾಘವೇಂದ್ರ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಬಸವರಾಜ್, ಕೂಬಾನಾಯ್ಕ, ಶಿವಮ್ಮ, ಗೌತಮಿ, ಸ್ವಾತಿ, ಪೂಜಾ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

