ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಶುಲ್ಕ ಹೇರಿಕೆ ಮತ್ತು ಸುಲಿಗೆಯ ಧೋರಣೆಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂಜಿನಿಯರಿಂಗ್, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಪ್ಷನ್ ಎಂಟ್ರಿ (option entry) ಮಾಡಲು ಎಲ್ಲಾ ವಿದ್ಯಾರ್ಥಿಗಳಿಗೆ – ಅವರ ವರ್ಗವನ್ನು ಲೆಕ್ಕಿಸದೆಯೇ 750 ರೂ. ಶುಲ್ಕವನ್ನು ವಿಧಿಸಿದೆ. ಈ ಅನಿರೀಕ್ಷಿತ ಮತ್ತು ನ್ಯಾಯಸಮ್ಮತವಲ್ಲದ ನಿರ್ಧಾರವು ತೀವ್ರ ಖಂಡನೀಯವಾಗಿದೆ.
ಪ್ರವೇಶ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲೇ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷಾ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಆಪ್ಷನ್ ಎಂಟ್ರಿ ಹಂತದಲ್ಲಿ ಹೆಚ್ಚುವರಿ ರೂ. 750 ವಿಧಿಸಿರುವುದು ಕೇವಲ ಹೇರಿಕೆ ಮಾತ್ರವಲ್ಲದೇ ಹಗಲು ದರೋಡೆ ಧೋರಣೆಯನ್ನು ಸಹ ಆಗಿದೆ. 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ,
ಈ ಕ್ರಮವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 300 ಕೋಟಿಗಿಂತ ಹೆಚ್ಚು ಆದಾಯವನ್ನುಗಳಿಸಿಕೊಡಲಿದೆ. ಈ ಶುಲ್ಕ ಹೇರಿಕೆ ನಿಜವಾದ ಆಡಳಿತಾತ್ಮಕ ಅಗತ್ಯವನ್ನು ಪೂರೈಸಲು ಉದ್ದೇಶಿಸಲಾಗಿದೆಯೋ ಅಥವಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಂದ ಹಣವನ್ನು ಸುಲಿಗೆ ಮಾಡುವ ತಂತ್ರವೊ? ಇದರ ನೈಜ ಉದ್ದೇಶವೇನು ಎಂಬ ಪ್ರಶ್ನೆಯನ್ನು ನಾವು ಕೇಳುತ್ತೇವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಒಂದು ರಾಜ್ಯ ಸರ್ಕಾರಿ ಸಂಸ್ಥೆಯಾಗಿ, ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಬೇಕೇ ಹೊರತು, ಅದರಿಂದ ಲಾಭಗಳಿಸಬಾರದು. ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಇಂತಹ ನೀತಿಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ ಮತ್ತು ಮಹತ್ವಾಕಾಂಕ್ಷಿ ಯುವಕರ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತವೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO), ಈ ವಿದ್ಯಾರ್ಥಿ ವಿರೋಧಿ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು 750 ರ ಆಪ್ಷನ್ ಎಂಟ್ರಿ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ. ಈ ಅನ್ಯಾಯದ ಹೇರಿಕೆಯ ವಿರುದ್ಧ ಧ್ವನಿ ಎತ್ತಲು ಮತ್ತು ಕೈಗೆಟುಕುವ ಮತ್ತು ಸಮಾನ ಶಿಕ್ಷಣ ಪಡೆಯುವ ಹಕ್ಕನ್ನು ರಕ್ಷಿಸಲು ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಜನರ ಸಾಮಾನ್ಯರು ಒಗ್ಗಟ್ಟಾಗಿ ಹೋರಾಡಬೇಕೆಂದು ಎಐಡಿಎಸ್ಓ ಜಿಲ್ಲಾ ಮುಖಂಡ ಕೆ.ಈರಣ್ಣ ಮನವಿ ಮಾಡಿದ್ದಾರೆ.