ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯುತ್ಕೃಷ್ಟ ಉಡುಪುಗಳನ್ನು ಸಿದ್ಧಪಡಿಸಿಕೊಡುವ “ಬೆನಕ ಬಿಸ್ಪೋಕ್- ಕಸ್ಟಮ್ ಮೇಡ್” ಮಳಿಗೆ ವಿಜಯನಗರ ಜಿಲ್ಲೆಯ ಹಂಪಿ ನಗರದಲ್ಲಿ ಆರಂಭಗೊಂಡಿದೆ.
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿಯವರು, “ವಸ್ತ್ರೋದ್ಯಮವು ಇಂದು ಅಗಾಧವಾಗಿ ಬೆಳೆದಿದ್ದು, ಅದರ ಜೊತೆ ಜೊತೆಗೆ ಸ್ಪರ್ಧೆಯೂ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಗುಣಮಟ್ಟದ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪುಗಳನ್ನು ಗ್ರಾಹಕರಿಗೆ ಒದಗಿಸಲು ಬೆನಕ ಬಿಸ್ಪೋಕ್ ಮಳಿಗೆ ಸ್ಥಾಪಿಸಿರುವುದು ಸ್ವಾಗತಾರ್ಹ”, ಎಂದರು.
“ಈ ಮಳಿಗೆಯಲ್ಲಿ ಶುಭ ಸಮಾರಂಭಗಳಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉಡುಪುಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ನಮ್ಮ ಪರಂಪರೆಯನ್ನು ಉಳಿಸುವ ಕೆಲಸವನ್ನು ಇಂತಹ ಮಳಿಗೆಗಳು ಮಾಡುತ್ತಿವೆ. ಹೀಗಾಗಿ ಈ ರೀತಿಯ ಗ್ರಾಹಕರ ಸದಭಿರುಚಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಬೆನಕ ಬಿಸ್ಪೋಕ್ ನ ಉದ್ಯಮ ಬೆಳೆಯಬೇಕು”, ಎಂದು ಶುಭ ಹಾರೈಸಿದರು.
ಬೆನಕ ಬಿಸ್ಪೋಕ್ ಕಸ್ಟಮ್ ಮೇಡ್ ಮಳಿಗೆಯ ಮಾಲೀಕ ಬೆನಕ ರಾಜು ಜಿ. ಅವರು ಮಾತನಾಡಿ, “ಗ್ರಾಹಕರನ್ನು ದೇವರೆಂದು ಪರಿಗಣಿಸಿ ಅವರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಶುಭ ಸಮಾರಂಭಗಳಿಗೆ ಗ್ರಾಹಕರ ದೇಶ ಭಾಷೆಯನ್ನು ಆಧರಿಸಿ ಇಲ್ಲಿ ಉಡುಪುಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ. ಕಾರ್ಯಕ್ರಮಗಳಿಗೆ ಅನುಗುಣವಾಗಿ ಉಡುಪುಗಳನ್ನು ತಯಾರಿಸಿಕೊಡುತ್ತೇವೆ. ನಾವು ಈಗಾಗಲೇ ಅನುಬಂಧ ಅವಾರ್ಡ್ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಕಾಸ್ಟ್ಯೂಮ್ ಗಳನ್ನು ಸಿದ್ಧಪಡಿಸಿಕೊಟ್ಟಿದ್ದೇವೆ” ಎಂದು ಹೇಳಿದರು.
ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ, ಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ಬೆಂಕೋಶ್ರೀ), ಮಜಾ ಭಾರತ ಖ್ಯಾತಿಯ ಸುಶ್ಮಿತಾ ಜಗ್ಗಪ್ಪ, ಅಂಬೇಡ್ಕರ್ ಕ್ರಾಂತಿಸೇನೆಯ ಅಧ್ಯಕ್ಷ ಕ್ರಾಂತಿರಾಜು ಉಪಸ್ಥಿತರಿದ್ದರು.