ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾಸ್ಯ ಮೊಗ್ಗುಗಳು
—————————
ನಾನು ನಾನಾಗದಿರಲು
ಕಾರಣ ನೀವು ಸ್ವಾಮಿ
ಅಕ್ಷರ ದೂರಾಗಲು
ಮೂಲ ನೀವೇ ಅಲ್ಲವೇ
ಬಡತನದ ದಿನಗಳು
ಅರೆ ಬೆತ್ತಲ ಕೃಶ ದೇಹ
ದುಸ್ಥಿತಿಯ ನೋಡಿ
ಹಸಿವೆಂಬುದು
ಬಳಿ ದೂಡಿದಾಗ
ನೀವು ಸಹಕರಿಸಿದ್ದು
ಹೆತ್ತವರಿಗೆ ಹೆಗಲು
ನಿಮ್ಮ ಗಳಿಕೆಗೆ
ವಸ್ತುವಾದದ್ದು ನೆನಪಿದೆ
ಮೊಗ್ಗ ಮೆಲುಕಿನಲಿ
ಬಗೆ ಬಗೆಯ ಚಿತ್ತಾರಗಳು
ಬಣ್ಣ ಬಣ್ಣದ
ಕನಸುಗಳ ಜೋಲಿ
ಗೋಲಿ ಗಾಲಿ ರಂಗೋಲಿ
ಬೆಳಕರಿದ
ಎಳಸಿನ ಮುದ್ದಾಟಗಳು
ಒಟ್ಟೊಟ್ಟಿಗೆ ಬಲೆ ಬೀಸಿ
ಬಂಧಿಸಿದ್ದು ನೀವಲ್ಲವೇ
ಆಶಾ ಗೋಪುರ
ಕಳಚಿ ಶೂನ್ಯದಲಿ
ಬುಡದ ಬೇರೊಳಗೆ
ನೀವೇ ಅವರಿಸಿದಿರಲ್ಲ
ನಿಮ್ಮಯ ಮಹಲುಗಳ ತೀಟೆಗೆ
ನಮ್ಮ ಬಳಿಸಿಕೊಂಡಿದ್ದೀರಲ್ಲ
ನಿಮ್ಮ ಮಹತ್ವಕಾಂಕ್ಷೆಯ
ಪುಟ್ಟ ಹೆಜ್ಜೆಗಳಂತಲ್ಲವೇ ನಾವು
ಈ ನೆಲದಲ್ಲೇ ಬಂದವರು
ಒಮ್ಮೊಮ್ಮೆ ನನಗನಿಸಿದಂತೆ
ನೀವು ಸಹಕರಿಸಿ
ಅಕ್ಷರಕ್ಕೆ ದೂಡಿದ್ದರೆ
ಈ ದೇಶದ
ಉತ್ತಮ ಪ್ರಜೆಯಾಗಿ
ನಾವುಗಳು
ಉದಯಿಸುತ್ತಿದ್ದೆವೇನೋ
ವಾಸ್ತವವೆಂದರೆ
ಕಲಿಕೆ ಇಲ್ಲದ ಬದುಕು
ಅನಕ್ಷರ ಕುಲದಾಚೆ ಬಿದ್ದಂತೆ
ದಿನಚರಿಗಳಲಿ
ಬಾಡಿಗೆ ಎತ್ತುಗಳು
ಹೊರುವ ಕತ್ತೆಯ ಕಥೆಯಾದೆವು
ವಿಷಾದವಿದೆ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.