ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕಾಲ್ತುಳಿತ ಪ್ರಕರಣವನ್ನು ಅಧಿಕಾರಿಗಳ, ಆಡಳಿತ ವ್ಯವಸ್ಥೆಯ ಮೇಲೆ ಹೊರಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು ಆದರೆ ಅವರು ಈಗ ಯೂ-ಟರ್ನ್ ಹೊಡೆದು ನನ್ನದೇನು ತಪ್ಪಿಲ್ಲ ಎನ್ನುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಯಾವುದೇ ವಿಘ್ನಗಳಿಲ್ಲದೆ ಸಂಪನ್ನವಾಗಿದ್ದರೆ ಅದರ ಕ್ರೆಡಿಟ್ ಹೊತ್ತುಕೊಳ್ಳಲು ಡಿಕೆಶಿ ಅವರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅದಕ್ಕಾಗಿಯೇ ತಮ್ಮ ಪಿಆರ್ ತಂಡಕ್ಕೆ ವಿಶೇಷ ಸೂಚನೆ ನೀಡಿದ್ದರು. ಆದರೆ ದುರ್ಘಟನೆ ಸಂಭವಿಸಿ, 11 ಜನರು ಸಾವನ್ನಪ್ಪಿದ ಬಳಿಕ ಡಿಸಿಎಂ ಅವರು ಘಟನೆಯಿಂದ ಅಂತರ ಕಾಯ್ದುಕೊಂಡು ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ, ಕ್ರಿಕೆಟ್ ಸಂಸ್ಥೆ, ಪ್ರಾಂಚೈಸಿಗಳ ಮೇಲೆ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ನೀಡಿದ್ದ ಎಚ್ಚರಿಕೆಯನ್ನು ಧಿಕ್ಕರಿಸಿ ಡಿಸಿಎಂ ಮತ್ತು ಸರ್ಕಾರ ಎರಡೆರಡು ಕಾರ್ಯಕ್ರಮವನ್ನು ಆಯೋಜಿಸಿದ್ದು ಏಕೆ?
ವಿಧಾನಸೌಧದ ಮೆಟ್ಟಿಲ ಬಳಿ ನಡೆದ ಕಾರ್ಯಕ್ರಮದ ವೇಳೆಯೇ ಕಾಲ್ತುಳಿತ ಆಗಿ ಜನ ಸಾಯುತ್ತಿದ್ದರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟಗಾರರನ್ನು ಕರೆದುಕೊಂಡು ಹೋಗಿ ಅಲ್ಲಿ ಕಪ್ಗೆ ಮುತ್ತಿಕ್ಕಿದ್ದು ಏಕೆ? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ, ಅದು ಖಾಸಗಿ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳು ಹೋಗಿದ್ದು ಏಕೆ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.