ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಬಗ್ಗೆ ದ್ವೇಷ ಭಾಷಣ ಮಾಡಲು ಹಾಸನಕ್ಕೆ ಹೋಗುವ ಸಿದ್ದರಾಮಯ್ಯ, ಬಳ್ಳಾರಿ ಜಿಲ್ಲಾಸ್ಪತ್ರೆ ಸಾವಿನ ಕೂಪವಾಗಿದ್ದು ಬಾಣಂತಿಯರ ಸರಣಿ ಸಾವು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಬಳ್ಳಾರಿಗೆ ಹೋಗಲು ಸಮಯವಿಲ್ಲವೇ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸದೆ, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಲಾಗದ, ನೊಂದವರ ಕಣ್ಣೀರು ಒರೆಸದ ನೀವೆಂಥಾ ಸಿಎಂ? ದ್ವೇಷ ರಾಜಕಾರಣದಲ್ಲಿ ಎಲ್ಲರನ್ನು ಮೀರಿಸುತ್ತಿದ್ದೀರಿ. ರಾಜ್ಯದ ಆರೋಗ್ಯ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಬದುಕಿದ್ದಾರಾ? ಎಂದು ರಾಜ್ಯದ ಜನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದ್ದರು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಬಾಣಂತಿಯರಿಗೆ ನೀಡಿದ ಐವಿ ದ್ರಾವಣ ಹಾಗೂ ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಕಾಂಗ್ರೆಸ್ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರು ಮಗುವಿನ ಮುಖ ನೋಡುವ ಮೊದಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಈ ವರ್ಷ ರಾಜ್ಯದಲ್ಲಿ 327 ಬಾಣಂತಿಯರು ಮೃತಪಟ್ಟಿದ್ದಾರೆ. ಭ್ರಷ್ಟ ಕಾಂಗ್ರೆಸ್ಸರ್ಕಾರದ ಸಚಿವರ ಪರ್ಸಂಟೇಜ್ವ್ಯವಹಾರ ಮತ್ತು ಮೆಡಿಕಲ್ಮಾಫಿಯಾಕ್ಕೆ ಮುಗ್ದರು ಬಲಿಯಾಗುತ್ತಿರುವುದು ರಾಜ್ಯದ ದುರಂತ. ಸದಾ ಸ್ವಿಮ್ಮಿಂಗ್ಪೂಲ್ನಲ್ಲಿ ತೇಲಾಡುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವರದಿ ಬರಲಿ ಎಂದು ಉಡಾಫೆ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಬಾಣಂತಿಯರ ಸರಣಿ ಸಾವೀಗಿಡಾಗುತ್ತಿದ್ದರೂ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳುವುದಕ್ಕೂ ಸಮಯವಿಲ್ಲದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬರೀ ವರ್ಣದ್ವೇಷದ ಮಾತುಗಳನ್ನು ಆಡುತ್ತಾ ಓಡಾಡುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.