ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಎರಡು ವರ್ಷಗಳಲ್ಲೇ ರಾಜ್ಯದಲ್ಲಿ 1,886ಕ್ಕೂ ಹೆಚ್ಚು ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರ, ಸುಳ್ಳು ಭರವಸೆಗಳನ್ನು ಕೊಟ್ಟು ಜಾಹೀರಾತುಗಳಲ್ಲಿ ಮಾತ್ರ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಜೆಡಿಎಸ್ ದೂರಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ, ಕಂದಾಯ ಅಧಿಕಾರಿಗಳು ರೈತರು ಆತ್ಮಹತ್ಯೆಯ ಅಂಕಿ-ಅಂಶ ಬಹಿರಂಗಪಡಿಸಿದ್ದಾರೆ. ಬೆಳೆ ನಷ್ಟ ಮತ್ತು ಸಾಲದ ಶೂಲ ಆತ್ಮಹತ್ಯೆಯ ಕೂಪಕ್ಕೆ ನೂಕುತ್ತಿವೆ.
ನೇಗಿಲಯೋಗಿಯ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ, ಅನ್ನದಾತರನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡುವಲ್ಲಿ ವಿಫಲವಾಗಿದೆ. ರೈತರ ಆತ್ಮಹತ್ಯೆಯಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು 3ನೇ ಸ್ಥಾನದಲ್ಲಿದೆ ಎನ್ನುವುದು ದುರದೃಷ್ಟಕರ ಎಂದು ಜೆಡಿಎಸ್ ಸೂಚ್ಯವಾಗಿ ಟೀಕಿಸಿದೆ.