ಚಂದ್ರವಳ್ಳಿ ನ್ಯೂಸ್, ಆನೇಕಲ್:
ಕಾಡಾನೆಗಳ ಹಿಂಡು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಆಗಮಿಸಿದ್ದು ಡೆಂಕಣಿಕೋಟೆ ಸಮೀಪದ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಹತ್ತಕ್ಕೂ ಹೆಚ್ಚು ಆನೆಗಳು ಡೆಂಕಣಿಕೋಟೆಯಲ್ಲಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ತೋಟಗಳಲ್ಲಿ ಓಡಾಡುತ್ತಿದ್ದು ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ.
ತಮಿಳುನಾಡು ಡೆಂಕಣಿಕೋಟೆ ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳ ಹಿಂಡನ್ನು ಅರಣ್ಯದತ್ತ ಓಡಿಸಲು ಹರಸಾಹಸ ಮಾಡುತ್ತಿದ್ದರೆ, ಕಾಡಾನೆಗಳು ಮರಿ ಆನೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ.
ತಮಿಳುನಾಡಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಕ್ರಮ ವಹಿಸಿದ್ದಾರೆ. ಮುತ್ಯಾಲ ಮಡುವು, ವಣಕನಹಳ್ಳಿ, ದೇವರಬೆಟ್ಟ ಸೇರಿದಂತೆ ವಿವಿಧೆಡೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಾಡಾನೆಗಳು ನಾಡಿನತ್ತ ಬರಲು ಅರಣ್ಯನಾಶವೇ ಇದಕ್ಕೆ ಮೂಲ ಕಾರಣ ಎಂದು ಪರಿಸರ ಪ್ರೇಮಿಗಳು ಹೇಳುತ್ತಿದ್ದಾರೆ.