ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿ ಶ್ರೀಮದ್ ರಂಬಾಪುರಿ ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿದರು.
ಶ್ರೀಮದ್ರಂಭಾಪುರಿ ವೀರಗಂಗಾಧರಜ್ಜಯ್ಯನವರು ‘ಧರ್ಮದಿಂದಲೇ ಶಾಂತಿ ವಿಶ್ವಕ್ಕೆ; ಧರ್ಮಕ್ಕೆ ಜಯವಾಗಲಿ. ನಾಡು ಧರ್ಮ ಸಾಮ್ರಾಜ್ಯವಾಗಲಿ; ಭಕ್ತಿಯುತ ಬೀಡಾಗಲಿ. ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ; ಧರ್ಮಕ್ಕಾಗಿ ತಾಳಿರಿ’ ಎಂಬ ಅದ್ಭುತ ಸಂದೇಶ ಸಾರಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಧರ್ಮ- ದೇವರನ್ನು ನಾವು ಎಂದಿಗೂ ಮರೆಯಬಾರದು. ಹಿರಿಯರು ‘ಮನೆ ಹುಷಾರು, ಮಠ ಹುಷಾರು’ ಎಂದಿದ್ದಾರೆ. ತಾಯಿ- ತಂದೆ- ಗುರು ಸಮಾಜದ ಮೂರು ಕಣ್ಣುಗಳು. ಹುಟ್ಟುವಾಗ ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ.
‘ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು’. ಹೀಗಾಗಿ ಗುರುಗಳು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.
ರಂಭಾಪುರಿ ಮಠಕ್ಕೆ ದೊಡ್ಡ ಇತಿಹಾಸವಿದೆ, ಪರಂಪರೆ ಇದೆ. ಈ ಮಠದೊಂದಿಗೆ ನನಗೆ ಭಕ್ತನಿಗೂ- ಭಗವಂತನಿಗೂ ಇರುವ ಸಂಬಂಧವಿದೆ. ರಂಭಾಪುರಿ ಶ್ರೀಗಳು ನಮ್ಮೂರಿಗೆ ಬರುತ್ತಾರೆನ್ನುವುದೇ ನಮ್ಮ ಭಾಗ್ಯ. ನಿಮ್ಮೆಲ್ಲರ ಸೇವಕನಾಗಿ ಈ ಬೆಟ್ಟದ ಅಭಿವೃದ್ಧಿಗೆ ನಿಮ್ಮೆಲ್ಲರ ಜೊತೆ ನಾನೂ ನಿಲ್ಲುತ್ತೇನೆ! ಎಂದು ಡಿಸಿಎಂ ತಿಳಿಸಿದರು.